ಬಾದಾಮಿ: ತಟಕೋಟೆ ಸಮೀಪದ ಉತ್ತರ ಬೆಟ್ಟದಲ್ಲಿರುವ ಕನ್ನಡ ತ್ರಿಪದಿ ಕಪ್ಪೆ ಅರಭಟ್ಟನ ಶಾಸನದ ರಸ್ತೆಯ ಕಾಂಪೌಂಡ್ ಕಲ್ಲುಗಳು ಕುಸಿದಿವೆ. ಶೀಘ್ರವಾಗಿ ಇವುಗಳ ದುರಸ್ತಿ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರವಾಸಿಗರು, ಇತಿಹಾಸ ವಿದ್ವಾಂಸರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡದ ಮೊಟ್ಟಮೊದಲ ತ್ರಿಪದಿ ಶಾಸನವನ್ನು ವೀಕ್ಷಿಸಲು ಹೋಗುವರು. ರಸ್ತೆಯನ್ನು ಬೇಗ ದುರಸ್ತಿ ಮಾಡಿಸಲು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಮೌನೇಶ ಕುರುವತ್ತಿ ಅವರನ್ನು ಸಂಪರ್ಕಿಸಿದಾಗ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಮಂಜೂರಾಗಿ ಬಂದ ಕೂಡಲೇ ದುರಸ್ತಿ ಕೈಗೊಳ್ಳುವುದಾಗಿ ತಿಳಿಸಿದರು.