ಬಾಗಲಕೋಟೆ: ಜಾತಿವಾರು ಮೀಸಲಾತಿಗಾಗಿ ಆಗ್ರಹಿಸಿ ಹೋರಾಟಗಳ ನೆಪದಲ್ಲಿ ರಾಜಕೀಯ ಮುಖಂಡರು ಜನ ಸಾಮಾನ್ಯರನ್ನು ಎತ್ತಿಕಟ್ಟದೇ ವಿಧಾನಮಂಡಲದ ಒಳಗೆ ಶಾಂತಿಯುತವಾಗಿ ಹೋರಾಟ ನಡೆಸಲಿ ಎಂದು ಜನಸಾಮಾನ್ಯರ ಪಾರ್ಟಿ ಅಧ್ಯಕ್ಷ ಯಲ್ಲಪ್ಪ ಹೆಗಡೆ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ನೀಡುವಂತೆ ಹೋರಾಟ ಸಚಿವ ಬಿ.ಶ್ರೀರಾಮುಲು ಕೈಗೆತ್ತಿಕೊಂಡಿದ್ದಾರೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆದಿದೆ. ಪಂಚಮಸಾಲಿಗಳನ್ನು ಪ್ರವರ್ಗ 2ಎಗೆ ಸೇರಿಸಲು ನಡೆದಿರುವ ಹೋರಾಟದ ಮುಂದಾಳತ್ವ ಶಾಸಕ ಮುರುಗೇಶ ನಿರಾಣಿ ವಹಿಸಿಕೊಂಡಿದ್ದಾರೆ.
ಹೋರಾಟದ ಮುಂಚೂಣಿಯಲ್ಲಿ ಬಿಜೆಪಿ ನಾಯಕರೇ ಇದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಪಕ್ಷದ ಸರ್ಕಾರಗಳು ಇವೆ. ಹೀಗೆ ಜನರನ್ನು ಎತ್ತಿಕಟ್ಟಿ ಬೀದಿಗಿಳಿಸುವ ಬದಲು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.
ಜಾತಿ–ಜಾತಿಗಳ ನಡುವೆ ಕಿತ್ತಾಟ ಹಚ್ಚುವ ಬಿಜೆಪಿಯ ಈ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷ ಕೂಡ ಪರೋಕ್ಷವಾಗಿ ನೆರವಾಗುತ್ತಿದೆ. ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಶಾಂತಿ ಭಂಗ ತರಲು ಇಂತಹ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕೆ ಆಯಾ ಸಮುದಾಯದವರು ಹೆಚ್ಚಿನ ಮಹತ್ವ ನೀಡುವುದು ಬೇಡ. ಕಾನೂನು ಹೋರಾಟದ ಮೂಲಕ ಮೀಸಲಾತಿ ಹಕ್ಕುಗಳನ್ನು ಪಡೆಯಲು ಮುಂದಾಗಲಿ ಎಂದು ಒತ್ತಾಯಿಸಿದರು.