ಗುಳೇದಗುಡ್ಡ: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಡಾ.ಸಂಗಪ್ಪ ಎಸ್. ನಾರಾ ಅವರು ತಮ್ಮ ಅರ್ಧ ಎಕರೆ ಹಾಗೂ ಕೋರಿ ಪಡೆದ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿ ಕಾಯಕ ಮಾಡುತ್ತಿದ್ದಾರೆ. ತಮ್ಮ ಅನುಕೂಲಕ್ಕಾಗಿ ಹಲವು ಕೃಷಿ ಯಂತ್ರಗಳನ್ನೂ ಆವಿಷ್ಕರಿಸಿದ್ದಾರೆ.
ಸಾಂಪ್ರಾದಾಯಿಕ ಕೃಷಿ ಪದ್ಧತಿ ಜೊತೆಗೆ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡ ಅವರು ಆರ್ಥಿಕ ಭದ್ರತೆ ಹೇಗೆ ಹೊಂದಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಪ್ಪು ನೇರಳೆ ಬೆಳೆದು, ರೇಷ್ಮೆ ಕೃಷಿ ಮಾಡಲು ಲಭ್ಯವಿರುವ ಹಳೇ ವಸ್ತುಗಳನ್ನು ಬಳಸಿ ಹಲವು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿದ್ದಾರೆ. ಈ ಮೂಲಕ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕಡಿಮೆ ನೀರು ಬಳಸಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಇವರು, ಇದಕ್ಕಾಗಿ ಟ್ರ್ಯಾಲಿ ಸಿಸ್ಟಂ ಅಳವಡಿಸಿದ್ದಾರೆ. ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರನ್ನು ತಾವೇ ತಯಾರಿಸಿ ಬಳಸುತ್ತಿರುವುದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಪ್ರಶಸ್ತಿಗಳು: ಜಿಲ್ಲಾ ಆಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿ, ಧಾರವಾಡ, ಬೆಂಗಳೂರು, ರಾಯಚೂರು ಕೃಷಿ ವಿ.ವಿಗಳಿಂದ ಗೌರವ, ಥೈಲೆಂಡ್ನ ಬ್ಯಾಂಕಾಂಗ್-ಪ್ರೈಡ್ ಆಫ್ ಏಶಿಯಾ ಅಂತರರಾಷ್ಟ್ರೀಯ ಪ್ರಶಸ್ತಿ ಹಾಗೂ ಗ್ಲೋಬಲ್ ಅಚೀವರ್ಸ್ ಫೌಂಡೇಷನ್ನ ರಾಷ್ಟ್ರೀಯ ನಿರ್ಮಾಣ ರತ್ನ ಪುರಸ್ಕಾರ ಇವರಿಗೆ ಲಭಿಸಿವೆ.
ಹಿನ್ನೆಲೆ: ಪಟ್ಟಣದ ಶಿವಸಂಗಪ್ಪ ಹಾಗೂ ಚನ್ನಬಸವ್ವ ದಂಪತಿಗಳ ಪುತ್ರ ಡಾ.ಸಂಗಪ್ಪ ಎಸ್. ನಾರಾ ಅವರು ಬಡತನದಲ್ಲಿಯೂ ವಿದ್ಯಾಭ್ಯಾಸ ಮಾಡಿ ಶಿಕ್ಷಕರಾದರು. ನೇಕಾರಿಕೆ ವೃತ್ತಿ ಜತೆಗೆ ಕೃಷಿಯಲ್ಲಿ ತೊಡಗಿದ್ದಾರೆ. ಕನ್ನಡ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಹಲವು ಯಂತ್ರ ಶೋಧನೆ ಸೊಪ್ಪು ಕತ್ತರಿಸುವ ಭೂಮಿ ಕೊರೆಯುವ ರೆಂಬೆ ಕತ್ತರಿಸುವ ಕಳೆ ಕೊಚ್ಚುವ ಬುಡ ಕಟಾವು ಮಾಡುವ ಯಂತ್ರಗಳನ್ನು ಶೋಧಿಸಿರುವ ಡಾ.ಸಂಗಪ್ಪ ಎಸ್. ನಾರಾ ಅವರು ಸುಣ್ಣವನ್ನು ಹುಳು ಮನೆಗೆ ಯಂತ್ರದಿಂದಲೇ ಸಿಂಪಡಣೆ ಮಾಡುತ್ತಾರೆ. ನೆಲ ಸಡಿಲಗೊಳಿಸುವ ರಿಬ್ಬನ್ ಚಂದ್ರಿಕೆ ತಯಾರಿಸುವ ಯಂತ್ರವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರದರ್ಶಿಸಿದ್ದಾರೆ. ಗೂಡು ಬಿಡಿಸುವ ಯಂತ್ರ ಚಂದ್ರಿಕೆಗೆ ರಿಬ್ಬನ್ ಸುತ್ತುವ ಯಂತ್ರಗಳಿಗೆ ಭಾರತ ಸರ್ಕಾರದ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.