ಜಮಖಂಡಿ (ಬಾಗಲಕೋಟೆ): ಕೋವಿಡ್–19 ಸೋಂಕಿತ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮಾಹಿತಿ ಕಲೆಹಾಕುತ್ತಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಮುಂದಾದ ಇಬ್ಬರನ್ನು ಬುಧವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗಿರೀಶ ನಗರದಅಬ್ದುಲ್ ರಜಾಕ್ ಗೋಮರ್ಶೆ ಹಾಗೂ ಚಾಂದ್ಸಾಬ್ ಗೋಮರ್ಶೆ ಬಂಧಿತರು.
ಆಶಾ ಕಾರ್ಯಕರ್ತೆ ಸವಿತಾ ಹೊಳಿಯಪ್ಪಗೋಳ ಹಾಗೂ ಸಹಾಯಕಿ ಮಾದೇವಿ ಪಾಟೀಲ ಆರೋಗ್ಯ ಮಾಹಿತಿ ದಾಖಲಿಸಿಕೊಳ್ಳುವಾಗ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಾಖಲಾತಿ ಕಸಿದು ಅದರ ಮೇಲೆ ಗೀಟು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆಶಾ ಕಾರ್ಯಕರ್ತೆ ನೀಡಿದ ದೂರಿನ ಅನ್ವಯ ಕೋವಿಡ್–19 ವಿಪತ್ತು ನಿರ್ವಹಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.