ಬಾಗಲಕೋಟೆ: ಇಲ್ಲಿನ ನವನಗರದ ಸೆಕ್ಟರ್ ನಂ 38ರಲ್ಲಿನ ಮಸೀದಿ ಬಳಿ ಬುಧವಾರ ಸಂಜೆ ಪ್ರಚೋದನಕಾರಿಯಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಕೇಸರಿ ಬಾವುಟ ಕಟ್ಡಿದ್ದ ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ಮಸೀದಿ ಎದುರು ಪ್ರಚೋದನಕಾರಿಯಾಗಿ ವರ್ತಿಸಿದ್ದರು. ಈ ವೇಳೆ ಅವರಲ್ಲಿ ಒಬ್ಬ ಯುವಕನನ್ನು ಹಿಡಿದು ಸ್ಥಳೀಯರು ಥಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಥಳಿತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದರು.
ಈ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಸುದ್ದಿ ಹರಡಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಜಮಾಯಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ಗುಂಪುಗಳು ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಪ್ರಚೋದನಕಾರಿಯಾಗಿ ವರ್ತಿಸಿದ ನಾಲ್ವರು ಹಾಗೂ ಆ ಗುಂಪಿನಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ್ದ ಆರು ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ 'ಪ್ರಜಾವಾಣಿ'ಗೆ ತಿಳಿಸಿದರು.
"ಮಸೀದಿ ಎದುರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಾವಳಿ ಪರಿಶೀಲಿಸಿದ್ದು, ಕಲ್ಲು ತೂರಾಟ ನಡೆದಿಲ್ಲ. ಬದಲಿಗೆ ಯುವಕರ ಗುಂಪು ಸ್ಥಳೀಯರನ್ನು ಪ್ರಚೋದಿಸಿದೆ' ಎಂದರು.