ಬಾಗಲಕೋಟೆ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆದಿರುವ ಭಾರತ್ ಬಂದ್ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಹುನಗುಂದದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದರು.
ಹುನಗುಂದ ಪಟ್ಟಣದ ಹೊರ ವಲಯದಲ್ಲಿ ಹಾಯ್ದುಹೋಗಿರುವ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೆರೆದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ನಸುಕು ಹರಿಯುವ ಹೊತ್ತಿನಲ್ಲಿ ದಿಢೀರನೆ ಎದುರಾದ ಪ್ರತಿಭಟನೆಯಿಂದ ವಾಹನ ಚಾಲಕರು ತಬ್ಬಿಬ್ಬಾದರು. ಸಂಚಾರ ಸ್ಥಗಿತಗೊಳಿಸಿದರು.
ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರು ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.