ಗುಳೇದಗುಡ್ಡ: ‘ನನ್ನ ಅಪ್ಪನಿಗೆ ತೋರಿಸಿದ ಪ್ರೀತಿಯನ್ನು ನನಗೂ ತೋರಿಸಿ ಆಶೀರ್ವಾದ ಮಾಡಿದ್ದೀರಿ. ಶಾಸಕನಾಗಿ ಜವಾಬ್ದಾರಿಯನ್ನು ಅರಿತು ನಿಮ್ಮ ಗೌರವಕ್ಕೆ ದಕ್ಕೆ ಬರದ ರೀತಿಯಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡುತ್ತೇನೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಲ್ಲೂಕಿನ ಮುರುಡಿ ಗ್ರಾಮದಲ್ಲಿ ಗ್ರಾಮಸ್ಥರು ಗುರುವಾರ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ನಾನು ಜಾತಿ, ಮತ, ಪಕ್ಷಭೇದವಿಲ್ಲದೆ ಕೆಲಸ ಮಾಡಲು ತಿರ್ಮಾನಿಸಿದ್ದು ಎಲ್ಲರೂ ಗ್ರಾಮದ ಅಭಿವೃದ್ಧಿಯ ಕೆಲಸಗಳನ್ನು ನನ್ನ ಗಮನಕ್ಕೆ ತನ್ನಿ ಅಭಿವೃದ್ಧಿಗೆ ಕೈ ಜೋಡಿಸಿ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಅಗಸಿ ನಿರ್ಮಾಣ ಮುಂತಾದ ಕಾರ್ಯಗಳನ್ನು ಗ್ರಾಮಸ್ಥರು ಮೌಖಿಕವಾಗಿ ಶಾಸಕರ ಗಮನಕ್ಕೆ ತಂದಾಗ ಮಾಡಿಕೊಡುವ ಭರವಸೆ ನೀಡಿದರು. ನಂತರ ರಾಘಾಪೂರ, ಹಾನಾಪೂರ ಎಸ್.ಪಿ, ಸುಮಡ್ಡಿ, ಬೂದಿನಗಡ ಮುಂತಾದ ಗ್ರಾಮಗಳಿಗೆ ತೆರಳಿದರು.
ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಕಾಂಗ್ರೆಸ್ ಮುಖಂಡ ಪ್ರಕಾಶ ಮೇಟಿ, ರಮೇಶ ಬೂದಿಹಾಳ, ಡಾ.ವೈ.ಬಿ.ಗೌಡರ, ಫಕೀರಪ್ಪ ತಳವಾರ, ಮೋತಿಲಾಲ್ ರಾಠೋಡ, ಬಸು ದಳವಾಯಿ, ಮುರಡಿ ಗ್ರಾಮದ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.