ಬಾಗಲಕೋಟೆ: ಬನಹಟ್ಟಿಯಲ್ಲಿ ಮಂಗಳವಾರ ನಡೆದ ಕಲ್ಲು ತೂರಾಟ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಎಂ.ಶೇಖ್ ದೂರು ನೀಡಿದ್ದು, `ಕಾಲೇಜಿನ ಆವರಣಕ್ಕೆ ನುಗ್ಗಿ ಬಂದ 200ಕ್ಕೂ ಹೆಚ್ಚು ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ವಿದ್ಯಾರ್ಥಿಗಳು ಹೊರಗೆ ತೆರಳದಂತೆ ತಡೆದಿದ್ದು, ರಸ್ತೆ ಬಂದ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದು ದೂರನ್ನು ಹಲ್ಲೆಗೊಳಗಾದ ಶಿಕ್ಷಕ ಮಂಜುನಾಥ ನಾಯಕ ನೀಡಿದ್ದಾರೆ. `ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು' ಎಂದು ದೂರು ನೀಡಿದ್ದಾರೆ.
ಎರಡೂ ಪ್ರಕರಣಗಳ ತನಿಖೆ ಸಿಪಿಐ ಕರುಣೇಶಗೌಡ ಆರಂಭಿಸಿದ್ದಾರೆ.