ಬಾಗಲಕೋಟೆ: ಕೋವಿಡ್-19 ಸೋಂಕಿಗೆ ಶುಕ್ರವಾರ ಬಲಿಯಾದ ಬಾಗಲಕೋಟೆಯ 75 ವರ್ಷದ ವೃದ್ಧನ ಶವವನ್ನು ತಡರಾತ್ರಿ ಕುಟುಂಬದ ಸದಸ್ಯರ ಅನುಪಸ್ಥಿತಿಯ ನಡುವೆಯೇ ರೈಲು ನಿಲ್ದಾಣ ಸಮೀಪದ ರುದ್ರಭೂಮಿಯಲ್ಲಿ ಹೂಳಲಾಯಿತು.
ಕೋವಿಡ್-19 ಸೋಂಕಿನ ಶಂಕೆಯ ಕಾರಣಕ್ಕೆ ಕುಟುಂಬದ ಎಲ್ಲ ಸದಸ್ಯರನ್ನು ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್ನಲ್ಲಿ ಪ್ರತ್ಯೇಕವಾಗಿಇಡಲಾಗಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ತಡರಾತ್ರಿ ಒಂದು ಗಂಟೆಗೆ ಶವ ಸಂಸ್ಕಾರ ನೆರವೇರಿಸಿದರು.
ಅದಕ್ಕೂ ಮುನ್ನ ಶವಕ್ಕೆ ಹೈಡ್ರೊಕ್ಲೊರೈನ್ ದ್ರಾವಣ ಸಿಂಪಡಿಸಿ ಸೋಂಕು ಹರಡದಂತೆ ಜಾಗೃತಿ ವಹಿಸಲಾಗಿತ್ತು. ಸಿಬ್ಬಂದಿ ತಲಾ ಎರಡೆರಡು ಸ್ವಯಂ ರಕ್ಷಣೆ ಕವಚಗಳನ್ನು (ಪಿಪಿಟಿ) ಧರಿಸಿ ಶವದ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡರು.