ಬಾಗಲಕೋಟೆ: ‘ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ಹಣ ಪಾವತಿಸಲು ಅನುಕೂಲವಾಗುವಂತೆ ಕಾರ್ಪಸ್ ಫಂಡ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವೆ’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಆಸಕ್ತಿ ತೋರದಿದ್ದಲ್ಲಿ ರಾಜ್ಯ ಸರ್ಕಾರದಿಂದಲೇ ಫಂಡ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.
‘ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ನೀತಿ (ಎಫ್ಆರ್ಪಿ) ಅಡಿ ಕಾರ್ಖಾನೆಗಳು ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ರೈತರಿಗೆ ದರ ಪಾವತಿಸಬೇಕಿದೆ. ಆದರೆ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾರ್ಖಾನೆಗಳಿಗೆ ಕೋಟಾ ಪದ್ಧತಿ ನಿಗದಿಪಡಿಸಿದೆ. ತಿಂಗಳಿಗೆ ಇಷ್ಟುಸಕ್ಕರೆ ಮಾರಾಟ ಮಾಡಬೇಕಿರುವುದರಿಂದ ಒಮ್ಮೆಲೆ ರೈತರಿಗೆ ದರ ಪಾವತಿ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಆಯಾ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆ ಪ್ರಮಾಣ ಅವಲಂಬಿಸಿಬ್ಯಾಂಕ್ ಖಾತರಿ ಪಡೆದು ಕಾರ್ಪಸ್ ಫಂಡ್ ಮೂಲಕ ಕಬ್ಬಿನ ಬಾಕಿ ಪಾವತಿಗೆ ಹಣ ನೀಡಬಹುದಾಗಿದೆ. ಇದರಿಂದ ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಹಣ ದೊರೆಯಲಿದೆ’ ಎಂದರು.