ಬಾಗಲಕೋಟೆ: ಪಂಚಮಸಾಲಿ ಲಿಂಗಾಯತ ಸಮುದಾಯುಕ್ಕೆ ಮೀಸಲಾತಿ ಘೋಷಣೆ ಮಾಡದಿದ್ದರೆ, ಅಂತಿಮ ಹೋರಾಟ ಅನಿವಾರ್ಯ ಆಗಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 6 ತಿಂಗಳ ಕಾಲಾವಕಾಶ ಕೇಳಿದ್ದರು. ನಂತರ ಮುಖ್ಯಮಂತ್ರಿಯಾದ ಬೊಮ್ಮಾಯಿ ಅವರೂ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಕಾಯ್ದಿದ್ದೇವೆ. ಇನ್ನು ಕಾಯುವುದಿಲ್ಲ ಎಂದರು.
ಮೀಸಲಾತಿಯ ಹೋರಾಟ ಯಾರ ವಿರುದ್ಧವೂ ಇಲ್ಲ. ನಮ್ಮ ಸಮುದಾಯ ಒಕ್ಕುಲತನ ಅವಲಂಬಿಸಿದೆ. ರೈತರ ಮಕ್ಕಳಿಗೆ ಮೀಸಲಾತಿ ಸಿಗಬೇಕೆಂಬುದು ಬೇಡಿಕೆಯಾಗಿದೆ ಎಂದು ಹೇಳಿದರು.
ಹೋರಾಟದಲ್ಲಿ ತೃತೀಯ ಪೀಠದ ಶ್ರೀಗಳು ಭಾಗಿಯಾಗುವುದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪೀಠವನ್ನೂ ನಂಬಿ ಹೋರಾಡುತ್ತಿಲ್ಲ. ನಮಗೆ ಕೂಡಲಸಂಗಮ ಒಂದೇ ಪೀಠ. ಜತೆಗೆ ಬಂದವರನ್ನು ಸ್ವಾಗತಿಸುತ್ತೇವೆ. ಬಾರದಿರುವವರು ನಮ್ಮವರಲ್ಲ ಎಂದು ಸಾಗುತ್ತೇವೆ ಎಂದರು.
ಮೀಸಲಾತಿಗೆ ಹೋರಾಡದಿವರಿಗೆ ಬೆಂಬಲ:ಸಚಿವ ಮುರುಗೇಶ ನಿರಾಣಿ ಅವರು ಮುಂದಿನ ಸಿಎಂ ಎಂದು ಪೋಸ್ಟರ್ ವೈರಲ್ ಆಗಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಪೋಸ್ಟರ್ನಲ್ಲಿ ಹಾಕಿದ ಮಾತ್ರಕ್ಕೆ ಮುಖ್ಯಮಂತ್ರಿ ಆಗಬೇಕಲ್ಲವೇ? ಸಮಾಜದ ಮೀಸಲಾತಿಗೆ ಹೋರಾಡಿದವರಿಗೆ ಸಮಾಜವೂ ಬೆಂಬಲಿಸಲಿದೆ. ಜತೆಗೆ ಬಾರದವರಿಗೆ ಬೆಂಬಲ ಇಲ್ಲ ಎಂದು ಹೇಳಿದರು.