ರಾಂಪುರ: ಸರ್ಕಾರದ ಮಾರ್ಗಸೂಚಿ ಪಾಲಿಸಿ ಗಣೇಶ ಉತ್ಸವವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯ ಸಿಪಿಐ ಬಿ.ಎಂ. ಸೋರಿ ಹೇಳಿದರು.
ಇಲ್ಲಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ಶಾಂತಿ ಪಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆ ವರೆಗೂ ಎಲ್ಲ ಗಣೇಶ ಉತ್ಸವ ಮಂಡಳಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಬೇಕು ಎಂದು ಸೂಚಿಸಿದರು.
ರಾಂಪುರ ಹೊರ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗಳು ಸಂಬಂಧಿಸಿದ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದ ಸೋರಿ, ರಾತ್ರಿ ಹೊತ್ತು ಯಾವುದೇ ಕಾರ್ಯಕ್ರಮ ಆಯೋಜಿಸಲು ಅನುಮತಿ ಇರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ಸವವನ್ನು ಆಚರಿಸುವಂತೆ ಹೇಳಿದರು. ಪಿಎಸ್ಐ ಜನಾರ್ಧನ ಭಟ್ರಳ್ಳಿ ಮಾತನಾಡಿದರು.
ಎಎಸ್ಐ ಬಸವರಾಜ ಜಮದರಖಾನಿ, ಗ್ರಾಮದ ಮುಖಂಡರಾದ ರಮೇಶ ಹಕಾರಿ, ರವಿ ವಡವಡಗಿ, ದುಂಡೇಶ ಕೆಂಜೋಡಿ, ಸುರೇಶ ಪೂಜಾರಿ, ಮೌನೇಶ ಬಡಿಗೇರ, ವಿಠ್ಠಲ ಲಮಾಣಿ ಪಾಲ್ಗೊಂಡಿದ್ದರು.