ಬಾಗಲಕೋಟೆ: ‘ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೂ ಪತ್ನಿ ಮನೆಯವರು ಆಕೆಗೆ ಈಗ ಬೇರೆ ಮದುವೆ ಮಾಡಲು ಯತ್ನಿಸುತ್ತಿದ್ದಾರೆ. ಆಕೆಯರ ಸಹೋದರರಿಂದ ಜೀವ ಬೆದರಿಕೆ ಕರೆ ಬರುತ್ತಿದೆ. ನಮಗೆ ರಕ್ಷಣೆ ನೀಡಿ ಎಂದು ಮುಧೋಳದ ಶಂಕರ ಮಠಪತಿ ಹಾಗೂ ಧನಶ್ರೀ ಘೋರ್ಪಡೆ ದಂಪತಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.
‘ನಾವಿಬ್ಬರು ರಿಜಿಸ್ಟರ್ ಮದುವೆಯಾಗಿದ್ದೇವೆ. ಆದರೂ ನಮ್ಮನ್ನು ಕೂಡಿ ಬಾಳಲು ಬಿಡುತ್ತಿಲ್ಲ. ಜೊತೆಗೆ ಮದುವೆ ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಒತ್ತಾಯ ಪೂರ್ವಕವಾಗಿ ವಿಚ್ಛೇದನ ಕೊಡಿಸಲು ಯತ್ನಿಸುತ್ತಿದ್ದಾರೆ’ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ‘ಇಬ್ಬರು ರಕ್ಷಣೆ ಕೋರಿ ಮನವಿ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಮುಧೋಳ ಸಿಪಿಐ ಅವರಿಗೆ ತಿಳಿಸಲಾಗಿದೆ. ಇಬ್ಬರ ಪೋಷಕರನ್ನು ಕರೆಸಿ ಮಾತುಕತೆ ನಡೆಸಲು ಕ್ರಮ ವಹಿಸಲಾಗುತ್ತದೆ’ ಎಂದರು.