ಬಾಗಲಕೋಟೆ: ಮಹಾರಾಷ್ಟ್ರದ ಮೊಂಡುತನದಿಂದಾಗಿ ಕಳೆದ ವರ್ಷ ಭೀಕರ ಪ್ರವಾಹ ಸ್ಥಿತಿ ಎದುರಿಸಿದ್ದೆವು. ಈ ಬಾರಿ ಅದು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಮುಧೋಳ ತಾಲ್ಲೂಕಿನ ಮಾಚಕನೂರಿನಲ್ಲಿ ಶನಿವಾರ ಘಟಪ್ರಭಾ ನದಿ ಉಕ್ಕೇರಿ ಜಲಾವೃತಗೊಂಡ ಇತಿಹಾಸ ಪ್ರಸಿದ್ಧ ಹೊಳೆ ಬಸವೇಶ್ವರ ದೇವಸ್ಥಾನ ಹಾಗೂ ನದಿ ಪಾತ್ರದ ಜಮೀನುಗಳಲ್ಲಿನ ಬೆಳೆ ಪರಿಶೀಲಿಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೃಷ್ಣಾ ಕೊಳ್ಳದಲ್ಲಿನ ಮಹಾರಾಷ್ಟ್ರ ಭಾಗದಲ್ಲಿನ ಆರು ಜಲಾಶಯ ಹಾಗೂ ಬ್ಯಾರೇಜ್ ಗಳು ಶೇ 95ರಷ್ಟು ಭರ್ತಿಯಾಗುವವರೆಗೆ ಸುಮ್ಮನಿದ್ದು ನಂತರ ಏಕಾಏಕಿ ನದಿಗಳಿಗೆ ನೀರು ಹರಿಸುವ ಕೆಲಸ ಮಹಾರಾಷ್ಟ್ರ ಕಳೆದ ಬಾರಿ ಮಾಡಿತ್ತು. ಇದರಿಂದ ರಾಜ್ಯದಲ್ಲಿ ಪ್ರವಾಹದ ಸಂಕಷ್ಟ ಎದುರಾಗಿತ್ತು. ಅದನ್ನು ತಪ್ಪಿಸಲು ಜಲಾಶಯಗಳು ಶೇ 80ರಷ್ಟು ಭಾಗ ತುಂಬುತ್ತಿದ್ದಂತೆಯೇ ನೀರು ಹೊರಗೆ ಬಿಡುವಂತೆ ಕರ್ನಾಟಕ ಪ್ರತಿ ಬಾರಿ ಮನವಿ ಮಾಡುತ್ತಿದೆ.ಅದಕ್ಕೆ ಕಳೆದ ಬಾರಿ ಸೂಕ್ತ ಸ್ಪಂದನೆ ದೊರೆತಿರಲಿಲ್ಲ ಎಂದರು.
ಹೀಗಾಗಿ ಹಿಂದಿನ ವರ್ಷದ ಪರಿಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇತ್ತೀಚೆಗೆ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ.ಅದಕ್ಕೆ ಅವರಿಂದಲೂ ಸ್ಪಂದನೆ ದೊರೆತಿದೆ. ಎರಡು ರಾಜ್ಯಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕದಿಂದ ಸಮನ್ವಯದ ಕೊರತೆ ಎಂಬ ಮಾತು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹೊಸ ಮದ್ಯದಂಗಡಿ ಅವಕಾಶವಿಲ್ಲ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕಾರದ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರಾಗಲಿ, ಕಾರ್ಯಕರ್ತರಾಗಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವ ಲ್ಲಿ, ಅದರಿಂದ ಬರುವ ಆದಾಯದಲ್ಲಿ ರಾಜ್ಯ ನಡೆಸುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಅದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೊರತಲ್ಲ ಎಂದು ಗೋವಿಂದ ಕಾರಜೋಳ ಸ್ಪಷ್ಪಪಡಿಸಿದರು.
ರಾಜ್ಯಸರ್ಕಾರ ಹಳ್ಳಿಗೊಂದು ಮದ್ಯದಂಗಡಿ ತೆರೆತಲು ಹೊರಟಿದೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಕಾರಜೋಳ, ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವುದು ಬಿಜೆಪಿಯ ನೀತಿ ಅಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.