ರಬಕವಿ ಬನಹಟ್ಟಿ: ಯಾವುದೇ ಪ್ರಮುಖ ಪರೀಕ್ಷೆಯ ಸಂದರ್ಭದಲ್ಲಿ ಆಧುನಿಕ ಸೌಲಭ್ಯಗಳಿಂದ ದೂರ ಇರಬೇಕು. ಕಲಿಕೆಗೆ ಆಸಕ್ತಿಯೇ ಮುಖ್ಯವಾಗಿದೆ. ಯಾವುದೆ ವಿಷಯವನ್ನು ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಓದಬೇಕು. ನಾವು ಓದುವ ಸಂಗತಿಯನ್ನು ಚೆನ್ನಾಗಿ ಅರಿತುಕೊಳ್ಳಬೇಕು ಎಂದು ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯ ಡಾ.ಚಿದಾನಂದ ಕುಂಬಾರ ತಿಳಿಸಿದರು.
ಅವರು ಶುಕ್ರವಾರ ತಾಲ್ಲೂಕಿನ ಯಲ್ಲಟ್ಟಿಯ ಕೊಣ್ಣೂರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯಾವದೇ ಸಾಧನೆ ಮಾಡಲು ಸತತ ಪರಿಶ್ರಮ, ಶ್ರದ್ಧೆ ಅಗತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಾಧನೆಗೆ ಬಡತನ ತೊಡಕಾಗದೆ ಅದು ನಮ್ಮ ಸಾಧನೆಗೆ ಮೆಟ್ಟಿಲಾಗಬೇಕು. ಎಲ್ಲರೂ ಸಾಧನೆಯನ್ನು ಮಾಡಲು ಸಾಧ್ಯ. ಅದಕ್ಕಾಗಿ ಪ್ರಯತ್ನ ಮುಖ್ಯವಾಗಿದೆ ಎಂದು ಡಾ.ಚಿದಾನಂದ ಕುಂಬಾರ ತಿಳಿಸಿದರು.
ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಮಾರ್ಗದರ್ಶನ ಪಡೆದುಕೊಂಡು ಅವರ ಮಾರ್ಗದಲ್ಲಿ ನಡೆದರೆ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಪರೀಕ್ಷೆಯ ಸಮೀಪದಲ್ಲಿದ್ದಾರೆ. ವಿಷಯಗಳ ಬದಾಲವಣೆ ನಮ್ಮಲ್ಲಿಯ ಬೇಸರವನ್ನು ದೂರ ಮಾಡುತ್ತದೆ. ಶ್ರದ್ಧೆ ಮತ್ತು ತನ್ಮಯತೆಯಿಂದ ಓದಿ ಸಾಧನೆ ಮಾಡಿ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಶೀತಲ ಕೊಣ್ಣೂರ, ಎಸ್.ಎಂ.ದಾಶ್ಯಾಳ, ಮುರಗೇಶ ಮಗದುಮ್, ಶಿವಾನಂದ ಕಂದಗಲ್, ವಿಠ್ಠಲ ಬಡಿಗೇರ, ರೂಪಾ ನಡುವಿನಮನಿ, ಮಂಜುಶಾ ಪಾಂಡೆ, ಶಂಕರ ರೆಡ್ಡಿ, ರಾಜೇಂದ್ರಪ್ರಸಾದ, ಕರಾರ್ ಹುಸೇನ್ ಸೂಫಿ ಸೇರಿದಂತೆ ಅನೇಕರು ಇದ್ದರು.