ಬಾಗಲಕೋಟೆ: ‘ಸೋತವರು ಹೆಂಗೆ ಮಂತ್ರಿ, ಉಪಮುಖ್ಯಮಂತ್ರಿ ಆದರೂ ಎಂದು ನನ್ನ ಬಗ್ಗೆ ಬಹಳಷ್ಟು ಮಂದಿಗೆ ಆಶ್ಚರ್ಯವಾಗಿದೆ. ಆದರೆ ಹರ ಮುನಿದರೂ ಗುರು ಕಾಯುವನು ಎಂಬ ಮಾತಿನಂತೆ ನನಗೆ ಅಧಿಕಾರ ದೊರೆತಿದೆ‘ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ತೇರದಾಳ ತಾಲ್ಲೂಕಿನ ಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ ಭಾನುವಾರ ರಾತ್ರಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಕ್ಷ್ಮಣ ಹಿಂದಿನ ಚುನಾವಣೆಯಲ್ಲಿ ಸೋತಿದ್ದ. ಶಾಸಕನಾಗಿಲ್ಲದ ಸಂದರ್ಭದಲ್ಲೂ ಮಂತ್ರಿ ಮಾಡಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಮಾಡಿದ್ದಾರೆ ಎಂದು ರಾಜಕೀಯ ನಾಯಕರು ಅಚ್ಚರಿಪಟ್ಟಿದ್ದರು ಎಂದರು.
‘ಮಂತ್ರಿ ಆಗಬೇಕು ಎಂದು ಆಸೆಪಟ್ಟಿರಲಿಲ್ಲ. ನನಗೆ ಅದು ಗೊತ್ತೂ ಇರಲಿಲ್ಲ. ರಾತ್ರಿ 2 ಗಂಟೆಗೆ ಫೋನ್ ಮಾಡಿ ಎಬ್ಬಿಸಿ ಕರೆತಂದು ಬೆಳಿಗ್ಗೆ ಮಂತ್ರಿಯನ್ನಾಗಿ ಮಾಡಿದರು. ಪ್ರಮಾಣವಚನ ಸ್ವೀಕಾರ ಮಾಡಿದ ಮೇಲೆ ಬಹಳಷ್ಟು ಪತ್ರಕರ್ತರು ನನಗೆ ಕೇಳಿದ್ದರು. ಆಗ ಅವರಿಗೆ ಹರ ಮುನಿದರೂ ಗುರು ಕಾಯ್ವನು ಎಂದು ಹೇಳಿದ್ದೆನು. ಅದರ ಅರ್ಥ ಏನು ಎಂದು ಅವರು ಕೇಳಿದ್ದರು‘ ಎಂಬುದನ್ನು ನೆನಪಿಸಿಕೊಂಡರು.
‘ಮತದಾರನೆಂಬ ಹರ ಮುನಿಸಿಕೊಂಡು ಚುನಾವಣೆಯಲ್ಲಿ ಸೋಲಿಸಿದರೂ ಇಂತಹ ಮಹಾ ಪುರುಷರು, ಗುರುಗಳ ಆಶೀರ್ವಾದ ಬಲದಿಂದ ನಾನೀಗ ಅಧಿಕಾರ ಪಡೆದಿದ್ದೇನೆ‘ ಎಂದು ವೇದಿಕೆಯಲ್ಲಿದ್ದ ಭದ್ರಗಿರಿ ಜೈನಮಠದ ಶ್ರೀಗಳತ್ತ ಕೈ ತೋರಿದರು.