ಕಥೆ, ಕಾದಂಬರಿ, ಕಾವ್ಯ, ನಾಟಕ, ವೈಚಾರಿಕ ಸಾಹಿತ್ಯದಲ್ಲಿ ಕೃಷಿ ನಡೆಸಿದ್ದ ಅವರು, ತಮ್ಮ ಬರಹಗಳಲ್ಲಿ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಯಾವ ಗೋಜಲು ಇಲ್ಲದೇ ಆಪ್ತವಾಗಿ ಕಟ್ಟಿಕೊಡುತ್ತಿದ್ದರು. ಮನುಷ್ಯ ಪ್ರೀತಿಯ ಓಘದ ಹುಡುಕಾಟವೇ ಅವರ ಕವನ, ಕಥೆಗಳ ಮೂಲಾಧಾರವಾಗಿರುತ್ತಿತ್ತು. ಅವರ ಮೊದಲ ಕಥಾ ಸಂಕಲನ ‘ಪ್ರೀತಿಸಿದವರು’ ಮೊದಲುಗೊಂಡು ಇತ್ತೀಚಿನ ’ಬನದ ಹುಣ್ಣಿಮೆ‘ ಸುತ್ತಲಿನ ಪರಿಸರದ ಜೀವಪರತೆಯ ಸಾಕಾರವೇ ಆಗಿವೆ.