ಬಾಗಲಕೋಟೆ: ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳ ರೈತರಿಂದ ನೇರವಾಗಿ ಪ್ರತಿ ಕ್ವಿಂಟಲ್ಗೆ ₹1760 ಬೆಂಬಲ ಬೆಲೆಯಲ್ಲಿ ಮೇ 9ರಿಂದ ಮೆಕ್ಕೆಜೋಳ ಖರೀದಿಸಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾಗಲಕೋಟೆ ಸೇರಿದಂತೆ ಮಹಾಮಂಡಳದ ವ್ಯಾಪ್ತಿಯ ಧಾರವಾಡ ಪಶು ಆಹಾರ ಘಟಕಕ್ಕೆ ಸೇರಿದ ಏಳು ಜಿಲ್ಲೆಗಳ ರೈತರಿಂದ ಖರೀದಿಸಲಾಗುವುದು. ಮೆಕ್ಕೆಜೋಳವನ್ನು ಪಶು ಆಹಾರ ತಯಾರಿಕೆಗೆ ಬಳಸುವ ಕಾರಣ ಗುಣಮಟ್ಟದ ಫಸಲನ್ನು ಪೂರೈಸಲು ರೈತರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಹೆಸರು ನೋಂದಣಿಗೆ ಸೂಚನೆ
ಸರ್ಕಾರದ ಮಾರ್ಗಸೂಚಿಯಂತೆ ಮೊದಲ ಹಂತದಲ್ಲಿ ರೈತರು ಮೇ 9 ರಿಂದ ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಯನ್ನು ಭೇಟಿಯಾಗಿ ’ಫ್ರೂಟ್ಸ್‘ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಈ ವೇಳೆ ತಾವು ಬೆಳೆದ ಮೆಕ್ಕೆಜೋಳದ ಮಾದರಿಯನ್ನು (1 ಕೆ.ಜಿ) ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗೆ ನೋಂದಣಿ ಸಂಖ್ಯೆ ಜೊತೆ ನೀಡಬೇಕು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಇಲ್ಲದೇ ಇದ್ದ ಪಕ್ಷದಲ್ಲಿ ಸಮೀಪದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂಘದ ಕಾರ್ಯದರ್ಶಿ ಸ್ವೀಕರಿಸಿದ ಮೆಕ್ಕೆಜೋಳದ ಮಾದರಿಯನ್ನು ಆಯಾ ಒಕ್ಕೂಟದ ಕಚೇರಿಗಳಿಗೆ ತಲುಪಿಸುತ್ತಾರೆ. ಈ ರೀತಿ ಸ್ವೀಕರಿಸಿದ ಮಾದರಿಗಳು ಧಾರವಾಡದಲ್ಲಿರುವ ಪಶು ಆಹಾರ ಘಟಕಕ್ಕೆ ತಲುಪಿಸಲಾಗುವುದು. ಮೂರನೇ ಹಂತದಲ್ಲಿ ಸ್ವೀಕೃತ ಮೆಕ್ಕೆಜೋಳದ ಮಾದರಿ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಲ್ಲಿ, ರೈತರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು. ನಂತರ ರೈತರು ನಿಗದಿತ ದಿನ ಧಾರವಾಡದ ಕೆಎಂಎಫ್ ಪಶು ಆಹಾರ ಘಟಕಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಸಾಗಾಣಿಕೆ ಮಾಡುವಂತೆ ಸೂಚಿಸಲಾಗಿದೆ.
ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಬಾಗಲಕೋಟೆ ವಿಭಾಗಕ್ಕೆ ಡಾ.ಬಿ.ಕೆ.ಮಠ, ಕೆಎಂಎಫ್ ಉಪ ವ್ಯವಸ್ಥಾಪಕ (9591999466) ಹಾಗೂ ಜಮಖಂಡಿ ವಿಭಾಗಕ್ಕೆ ವಿ.ಆರ್.ಯಡಹಳ್ಳಿ, ಉಪ ವ್ಯವಸ್ಥಾಪಕ (9591999470) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.