ಬಾಗಲಕೋಟೆ: ಒಂದೆಡೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ವೇದಿಕೆ ಹಂಚಿಕೊಳ್ಳುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇನ್ನೊಂದು ಕಡೆ ತಮ್ಮ ಜಾತಿ ಸಂಘಟನೆಯಲ್ಲಿ ತೊಡಗುವ ಇಬ್ಬಂದಿ ನೀತಿ ಸರಿಯಲ್ಲ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮಿ ಕೈಗೆತ್ತಿಕೊಂಡಿರುವ ಪಾದಯಾತ್ರೆ ಅಖಂಡ ಲಿಂಗಾಯತ ಹೋರಾಟಕ್ಕೆ ಧಕ್ಕೆ ಉಂಟು ಮಾಡಲಿದೆ. ಕೂಡಲೇ ಅದನ್ನು ಕೈಬಿಡಲಿ ಎಂದರು.
ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂದು ಅವರು ಮಾಡುತ್ತಿರುವ ಹೋರಾಟ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಇದರಿಂದ ಲಿಂಗಾಯತ ಸಮುದಾಯದಲ್ಲಿ ಧ್ವನಿ ಇಲ್ಲದ ಒಳಪಂಗಡಗಳಿಗೆ ತೊಂದರೆ ಆಗಲಿದೆ. ಅದರ ಬದಲು ಸಮುದಾಯದ 99 ಒಳಪಂಗಡಗಳಿಗೂ ಸಮಾನ ನ್ಯಾಯ ಕಲ್ಪಿಸಲಿರುವ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಕೈಜೋಡಿಸಲಿ ಎಂದು ಒತ್ತಾಯಿಸಿದರು.