ಬಾಗಲಕೋಟೆ:ಕಾರ್ತೀಕೋತ್ಸವದ ಅಂಗವಾಗಿ ಸಮೀಪದ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು.
ಕಾರ್ತೀಕೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.ಬೆಣ್ಣೂರಿನಿಂದ ಕಳಸ ಹಾಗೂ ವೀರಾಪುರದ ಹಗ್ಗವನ್ನು ತಂದು ರಥೋತ್ಸವಕ್ಕೆ ನೀಡಲಾಯಿತು. ಜಾತ್ರೆ ನಿಮಿತ್ತ ದೊಡ್ಡ ರಥವನ್ನು ವಿವಿಧ ಬಣ್ಣದ ಪೇಪರ್, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲವರೆಗೆ ಸಾಗಿತು.
ರಥೋತ್ಸವ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತರು ಉತ್ತತ್ತಿ, ಚುರುಮುರಿ ಹಾಗೂ ಬಾಳೆ ಹಣ್ಣುಗಳನ್ನು ರಥೋತ್ಸವಕ್ಕೆ ಅರ್ಪಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರ ಆರುತಿ ಹಾಗೂ ನಂದಿಕೋಲು, ವಾಧ್ಯಮೇಳದೊಂದಿಗೆ ಪಲ್ಲಕ್ಕಿಯ ರಥೋತ್ಸವದ ಜೊತೆಗೆ ಸಾಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸರದಿಯಲ್ಲಿ ನಿಂತ ಭಕ್ತರು ವೀರಭದ್ರೇಶ್ವರ ದರ್ಶನ ಪಡೆದು ಪುನೀತರಾದರು.ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಿಂದ ಭದ್ರತೆ ವಹಿಸಲಾಗಿತ್ತು.