ಮುಧೋಳ/ಬಾದಾಮಿ: ನಿರಂತರ ಮಳೆಯಿಂದ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಹಿರಣ್ಯಕೇಶಿ, ಮಾರ್ಕಾಂಡೇಯ ಹಾಗೂ ಬಳ್ಳಾರಿ ನಾಲಾದಿಂದ ನೀರು ಘಟಪ್ರಭಾ ನದಿಗೆ ಸೇರುತ್ತಿದ್ದು 21 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಹಿಡಕಲ್ ಜಲಾಶಯದಿಂದ ನದಿಗೆ ಇನ್ನೂ ನೀರನ್ನು ಬಿಟ್ಟಿಲ್ಲ.
ತಾಲ್ಲೂಕಿನ ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ.
ತಾಲ್ಲೂಕಿನ ಮಾಚಕನೂರ ಬ್ಯಾರೇಜ್ ಹೊರತು ಪಡಿಸಿ 10 ಬ್ಯಾರೇಜ್ ಮುಳುಗಡೆಯಾಗಿವೆ, ತಾಲ್ಲೂಕಿನ ಚನ್ನಾಳ, ಜಾಲಿಬೇರಿ, ಕಸಬಾಜಂಬಗಿ, ತಿಮ್ಮಾಪುರ, ಅಂತಾಪುರ, ಮುಧೋಳ, ಮಿರ್ಜಿ, ಜೀರಗಾಳ, ಇಂಗಳಗಿ, ಆಲಗುಂಡಿ ಬಿಕೆ ಬ್ಯಾರೇಜ್ ಜಲಾವೃತಗೊಂಡಿವೆ.
ನದಿ ಪಾತ್ರದ ಜನತೆ ಜಾಗೃತರಾಗಿರಬೇಕು. ಬಟ್ಟೆ ತೊಳೆಯಲು, ದನಕರುಗಳನ್ನು ತೊಳೆಯಲು ಹಾಗೂ ನೀರು ಕುಡಿಸಲು ನದಿಗೆ ಹೋಗಬಾರದು ಎಂದು ತಹಶೀಲ್ದಾರ್ ಸಂಗಮೇಶ ಬಾಡಗಿ ತಿಳಿಸಿದ್ದಾರೆ.
ಬಾದಾಮಿ ವರದಿ: ಎರಡು ದಿನಗಳಿಂದ ಪಟ್ಟಣದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಮ್ಯೂಸಿಯಂ ರಸ್ತೆಯಲ್ಲಿ ಗುಂಡಿಗಳಾಗಿವೆ.
ಟಾಂಗಾ ನಿಲ್ದಾಣದಿಂದ ಮ್ಯೂಸಿಯಂ ವರೆಗೆ ನೂರಾರು ಗುಂಡಿ ಬಿದ್ದಿವೆ. ಪಾದಚಾರಿಗಳಿಗೆ, ದ್ವಿಚಕ್ರ ಮತ್ತು ಆಟೊ ಸಂಚಾರಕ್ಕೆ ತೊಂದರೆಯಾಗಿದೆ ಎಂದು ರಾಜು ಬೋಪರಡೆಕರ ಹೇಳಿದರು.
ಪುರಸಭೆಯು ರಸ್ತೆಯನ್ನು ಬೇಗ ನಿರ್ಮಿಸಿ ಜನ, ಪ್ರವಾಸಿಗರಿಗೆ ಮತ್ತು ವಾಹನ ಸಂಚಾರಕ್ಕೆ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.