ಬಾಗಲಕೋಟೆ: 'ಕೋವಿಡ್–19 ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ವಸತಿ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಅದರ ಸಾಧಕ–ಬಾಧಕಗಳ ಬಗ್ಗೆ ಪರಾಮರ್ಶಿಸಲು ಹಿರಿಯ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರ ನೆರವು ಪಡೆಯಲಾಗುತ್ತಿದೆ‘ ಎಂದು ಸಮಾಜ ಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಮುಧೋಳ ತಾಲ್ಲೂಕು ಮೆಳ್ಳಿಗೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಆರ್ಥಿಕ ಅಡಚಣೆ ನಡುವೆಯೂ ಸಮಾಜ ಕಲ್ಯಾಣ ಇಲಾಖೆಯಿಂದ 6 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ‘ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಎಸ್ಇಪಿ/ಟಿಎಸ್ಪಿ ಯೋಜನೆಯ ಅನುದಾನದಡಿ ₹60 ಕೋಟಿ ವೆಚ್ಚದಲ್ಲಿ ಮುಧೋಳ, ಬೆಳಗಾವಿ ಜಿಲ್ಲೆ ಅಥಣಿ, ಕೊಪ್ಪಳ ಹಾಗೂ ಸವದತ್ತಿಯಲ್ಲಿ ಚಾಲಕರ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಪ್ರತೀ ಕೇಂದ್ರಕ್ಕೆ ₹15 ಕೋಟಿ ವ್ಯಯಿಸಲಾಗುವುದು ಎಂದು ಹೇಳಿದರು.