ಬಾಗಲಕೋಟೆ: ‘ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ ಸಿಬಿಐ ಅಥವಾ ಇಂತಹದ್ದೇ ಏಜೆನ್ಸಿಯಿಂದ ತನಿಖೆ ಆಗಲಿ ಅಂತ ನಾನು ಹೇಳಿಲ್ಲ. ಬದಲಿಗೆ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಹೇಳಿದ್ದೇನೆ. ಆದರೆ ಸಿಎಂ ಯಡಿಯೂರಪ್ಪ ಯಾಕೆ ಸುಳ್ಳು ಹೇಳಿದ್ರು ಅಂತ ಗೊತ್ತಿಲ್ಲ‘ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ತಾಲ್ಲೂಕಿನ ಬೀರನೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ನನ್ನ ಮಾತು ಕೇಳೋದಾದ್ರೆ ಆಪರೇಷನ್ ಕಮಲದ ಸಂಪೂರ್ಣ ಭಾಗವನ್ನು ಸಿಬಿಐ ತನಿಖೆಗೆ ವಹಿಸಲಿ. ಅಲ್ಲಿ ಓಡಾಡಿರುವ ಸಾವಿರಾರು ಕೋಟಿ ಹಣದ ಮೂಲ ಗೊತ್ತಾಗಲಿ’ ಎಂದು ಆಗ್ರಹಿಸಿದರು.
‘ಪ್ರವಾಹದಿಂದ ರಾಜ್ಯದಲ್ಲಿ ₹10 ಸಾವಿರ ಕೋಟಿಯಷ್ಟು ಆಸ್ತಿ–ಪಾಸ್ತಿ ಹಾನಿಗೀಡಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳುವುದು ಬಿಟ್ಟು ಕೂಡಲೇ ನೆರವಿನ ರೂಪದಲ್ಲಿ ₹5 ಸಾವಿರ ಕೋಟಿ ಬಿಡುಗಡೆ ಮಾಡಲಿ’ ಎಂದು ಒತ್ತಾಯಿಸಿದರು.