ಬಾಗಲಕೋಟೆ: ಎಸ್ಎಸ್ಎಲ್ಸಿ ಪರೀಕ್ಷೆ ಮಕ್ಕಳ ಶೈಕ್ಷಣಿಕ ಬದುಕಿನ ಹೊರಳುಹಾದಿ. ಈ ಹಾದಿಯಲ್ಲಿ ಸಣ್ಣಪುಟ್ಟ ಅಡೆತಡೆಗಳ ದಾಟಿ ದೃಢವಾಗಿ ಸಾಗುವ ವಿಶ್ವಾಸ ಮೂಡಿಸಲು ‘ಪ್ರಜಾವಾಣಿ’ ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿತ್ತು.
ತಮ್ಮ ಬಿಡುವಿಲ್ಲದ ಕಾರ್ಯಭಾರದ ನಡುವೆಯೂ ಸ್ವತಃ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಸುಮಾರ ಒಂದೂವರೆ ತಾಸು ಕಾಲ ಜಿಲ್ಲೆಯ ಮಕ್ಕಳು–ಶಿಕ್ಷಕರ ನಿರಂತರ ಫೋನ್ ಕರೆಗಳಿಗೆ ಕಿವಿಗೊಟ್ಟರು. ಅವರೊಂದಿಗಿದ್ದ ವಿಷಯ ತಜ್ಞರ ತಂಡ ಮಕ್ಕಳ ಗೊಂದಲಗಳಿಗೆ ಪರಿಹಾರ ಒದಗಿಸಿತು. ಪರೀಕ್ಷಾ ಭಯವೆಂಬ ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು ಅವರಲ್ಲಿ ಭರವಸೆಯ ಬೆಳಕು ತುಂಬುವ ಪ್ರಯತ್ನ ಮಾಡಿತು.
ಈ ವೇಳೆ ಇಂಗ್ಲಿಷ್, ಗಣಿತ, ವಿಜ್ಞಾನ, ಹಿಂದಿ ಭಾಷಾ ವಿಷಯಗಳ ಬಗ್ಗೆ ಮಕ್ಕಳಿಂದ ಹೆಚ್ಚಿನ ಪ್ರಶ್ನೆಗಳು ತೂರಿಬಂದವು. ನಮ್ಮ ಶಾಲೆಗೆ ಕಟ್ಟಡವಿಲ್ಲ, ಶಿಕ್ಷಕರಿಲ್ಲ, ಸರಣಿ ಪರೀಕ್ಷೆ ಹೆಚ್ಚಾದವು, ಪರೀಕ್ಷೆ ಎಂದರೆ ಭಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎಕ್ಸಾಮ್ ವಾರಿಯರ್ಸ್ ಪುಸ್ತಕ ಓದಲು ಕೊಡಿಸಿ ಎಂಬ ಬೇಡಿಕೆಯೂ ಕೇಳಿಬಂದವು. ಶಿಕ್ಷಕಿಯೊಬ್ಬರು ಕರೆ ಮಾಡಿ ನನಗೆ ಪ್ರೌಢಶಾಲೆಗೆ ವರ್ಗಾವಣೆ ನೀಡುವಂತೆಯೂ ಕೋರಿಕೆ ಸಲ್ಲಿಸಿದರು. ಪರೀಕ್ಷೆಯ ಸ್ವರೂಪ, ಈ ಬಾರಿಯ ಬದಲಾವಣೆಗಳೇನು, ಹೆಚ್ಚು ಅಂಕಗಳಿಸಲು ಯಾವ ವಿಧಾನದಲ್ಲಿ ಓದಬೇಕು. ಸರಣಿ ಪರೀಕ್ಷೆಗಳಿಂದ ಆಗುವ ಲಾಭದ ಬಗ್ಗೆ ಡಿಡಿಪಿಐ ಹಾಗೂ ವಿಷಯ ತಜ್ಞರು ವಿವರಿಸಿದರು.
ಫೋನ್–ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಅಧಿಕಾರಿಗಳ ನಡುವಿನ ಆಯ್ದ ಪ್ರಶ್ನೋತ್ತರಗಳ ಸ್ಯಾಂಪಲ್ಗೆ ಇಲ್ಲಿ ಅಕ್ಷರ ರೂಪ ನೀಡಲಾಗಿದೆ.
* ಪ್ರಮೇಯಗಳನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು? (ಎಚ್.ಎಂ.ಕುಷ್ಟಗಿ–ಸೂಳೀಭಾವಿ)
ಪ್ರಮೇಯದಲ್ಲಿ ಬರುವ ದತ್ತ, ಸಾಧನೀಯ, ರಚನೆ ಮತ್ತು ಸಾಧನೆಗಳನ್ನು ಬರೆದು ಆಯಾ ಹಂತಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಜೊತೆಗೆ ಹೆಚ್ಚು ಪುನರಾವರ್ತನೆ ಆಗುವ ವಿಷಯ ಎಲ್ಲಿ ಪುನರಾವರ್ತನೆ ಆಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.
* ಪರೀಕ್ಷೆ ಎಂದರೆ ಭಯ, ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು? (ಅಶ್ವಿನಿ ಗೌಡರ–ಯಂಕಂಚಿ ಮಣಿನಾಗರ)
ಪರೀಕ್ಷೆ ಬಂದೇಬಿಟ್ಟಿತು ಎಂದು ಆಳವಾಗಿ ಚಿಂತಿಸುವ ಅಗತ್ಯವಿಲ್ಲ. ಬೆಳಿಗ್ಗೆ ಬೇಗ ಎದ್ದು ಸರಳ ವ್ಯಾಯಾಮ ಮಾಡಿ, ಶುದ್ಧ ಹವೆ ಸೇವಿಸಿರಿ. ಶಾಲಾ ಕೊಠಡಿಯಲ್ಲಿ ಗಮನ ಪಾಠದ ಕಡೆ ಇರಲಿ. ವಿಶ್ರಾಂತಿ ವೇಳೆಯಲ್ಲಿ 2ರಿಂದ 3 ನಿಮಿಷ ಧ್ಯಾನ ಮಾಡಿ ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಪರೀಕ್ಷೆ ನಿಮ್ಮನ್ನು (ವಿದ್ಯಾರ್ಥಿಗಳನ್ನು) ನೋಡಿ ಭಯ ಪಡಬೇಕು ಹೊರತು ನೀವು ಪರೀಕ್ಷೆಯನ್ನು ನೋಡಿ ಭಯ ಪಡುವುದು ಬೇಡ.
* ಸರಣಿ ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಿ..
ಯಾವುದೇ ಶಾಲೆಗೆ ಗಣಿತ ವಿಷಯದಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದ್ದರೆ ಅವರು ಸರಣಿ ಪರೀಕ್ಷೆ ಕಡಿಮೆ ಮಾಡಿಕೊಳ್ಳಬಹುದು. ಅವರದ್ದೇ ವಿಧಾನ ಅನುಸರಿಸಲು ಅವಕಾಶವಿದೆ.
* ಇಂಗ್ಲಿಷ್ ಹಾಗೂ ಗಣಿತ ವಿಷಯಗಳಿಗೆ ಪೂರ್ಣಾವಧಿ ಶಿಕ್ಷಕರು ಬೇಕು? (ಸದಾಶಿವ ಮಠಪತಿ, ಹನಗಂಡಿ ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ)
ಸದ್ಯ ಸರ್ಕಾರ ಪೂರ್ಣಾವಧಿ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರಯತ್ನಿಸಲಾಗುವುದು.
* ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಗೊತ್ತಿದೆ ಆದರೆ ಬರೆಯಲು ಸಮಯ ಸಾಕಾಗುತ್ತಿಲ್ಲ.. (ಕೀರ್ತಿ ಪೊಲೀಸ್ಪಾಟೀಲ, ಹಿರೇಓತಗೇರಿ ಶಾಲೆ)
ವೇಗವಾಗಿ ಹಾಗೂ ದುಂಡಾಗಿ ಬರೆಯುವುದನ್ನು ಮನೆಯಲ್ಲಿ ಪ್ರಾಕ್ಟಿಸ್ ಮಾಡಿ. ನಾಲ್ಕು ಅಂಕದ ಪ್ರಶ್ನೆಗೆ ಐದು ಅಂಕಗಳ ಉತ್ತರ ಬರೆಯುವುದರಿಂದಲೇ ಸಮಯ ಸಾಲೊಲ್ಲ. ಹಾಗಾಗಿಆಯಾ ಪ್ರಶ್ನೆಗೆ ಎಷ್ಟು ಬೇಕೊ ಅಷ್ಟು ಮಾತ್ರ ಉತ್ತರ ಬರೆಯಿರಿ. ಆಗ ಸುಲಭವಾಗಿ ನಿಗದಿತ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬಹುದು.
* ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? (ಹುಸೇನ್ ಭಾಷಾ–ಕಂಬಳಿಹಾಳ)
ನಿತ್ಯ ಪ್ರತೀ ವಿಷಯವನ್ನು ತಲಾ ಅರ್ಧಗಂಟೆಯಾದರೂ ಓದಬೇಕು. ಕಠಿಣ ವಿಷಯಕ್ಕೆ ಹೆಚ್ಚಿನ ಸಮಯ ನಿಗದಿಮಾಡಿಕೊಂಡು ಮುಂಜಾನೆ ಅಭ್ಯಾಸ ಮಾಡಿದರೆ ಒಳ್ಳೆಯದು. ಓದಿದ್ದನ್ನು ಬರೆಯಬೇಕು. ಆಗ ಅದು ಮನದಟ್ಟು ಆಗಿ ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ. ಕಲಿತದ್ದನ್ನು ಗೆಳೆಯ–ಗೆಳತಿಯರೊಂದಿಗೆ ಚರ್ಚಿಸಬೇಕು.
* ಪೂರ್ವಸಿದ್ಧತಾ ಪರೀಕ್ಷೆ, ಸರಣಿ ಪರೀಕ್ಷೆ ಎಷ್ಟು? (ದೀಪಾ ಕಾಳಗಿ, ಕೂಡಲಸಂಗಮ)
ಪೂರ್ವಸಿದ್ಧತಾ ಪರೀಕ್ಷೆ ಒಂದು. ಸರಣಿ ಪರೀಕ್ಷೆ ಇಲ್ಲ.
* ಪರೀಕ್ಷೆಯಲ್ಲಿ ಗಾದೆಯ ಮಾತು ಪಾಠದ ಹೊರಗಿನದ್ದು ಬರಬಹುದಾ? (ದೀಪಾ ಬೇವೂರ)
ಖಂಡಿತವಾಗಿಯೂ ಪಾಠದ ಹೊರಗಿನದ್ದು ಒಂದು ಇರುತ್ತದೆ.
* ಅಲಂಕಾರ ಪಾಠದ ಹೊರಗಡೆ ಕೇಳಬಹುದಾ? (ಮಂಜುನಾಥ ನಂದಿಹಾಳ, ಹಲಗಲಿ)
ಖಂಡಿತವಾಗಿಯೂ ಕೇಳಬಹುದು. ಈ ಬಾರಿ ಥೀಮ್ ಬೇಸ್ಡ್ ಇರುವುದರಿಂದ ಪರಿಕಲ್ಪನೆಯಲ್ಲಿರುವ ಎಲ್ಲ ಅಲಂಕಾರವನ್ನು ತಿಳಿದುಕೊಳ್ಳಬೇಕು.
* ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ? (ವಿದ್ಯಾಶ್ರೀ ವಾಲ್ಮೀಕಿ, ಸಿದ್ದಾಪುರ)
ಎಲ್ಲಾ ಅಧ್ಯಾಯಗಳಲ್ಲಿನ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪ್ರಶ್ನೆಪತ್ರಿಕೆಯ ಸ್ವರೂಪ ತಿಳಿದುಕೊಂಡು ಸರಣಿ ಪರೀಕ್ಷೆಗಳಲ್ಲಿ ಉತ್ತಮ ಪ್ರಯತ್ನ ಮಾಡಿ. ಪರೀಕ್ಷಾ ಸಮಯ ಹೊಂದಾಣಿಕೆ ಮಾಡಿಕೊಳ್ಳಿ. ಚಿತ್ರಗಳನ್ನು ಬರೆಯುವ ಕೌಶಲ್ಯ ರೂಢಿಸಿಕೊಳ್ಳಿ.
* ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ಅಂಕಗಳಿಸುವ ಬಗೆ ಹೇಗೆ? (ಐಶ್ವರ್ಯ ಪ್ರಥಮಶೆಟ್ಟಿ, ತೊದಲಬಾಗಿ)
ವಿಷಯವನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ಸಮಾಧಾನದಿಂದ ಅದನ್ನು ಓದಬೇಕು. ಉತ್ತರಗಳನ್ನು ನಿಖರವಾಗಿ ಬರೆಯಬೇಕು. ಸಮೀಪದ ಉತ್ತರಗಳಿಗೂ ಅಂಕಗಳನ್ನು ನೀಡಲಾಗುತ್ತಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದರೆ ಹೆಚ್ಚಿನ ಅಂಕ ಪಡೆಯಬಹುದು.
* ಇಂಗ್ಲಿಷ್ ವಿಷಯದಲ್ಲಿ ಪ್ರಬಂಧಕ್ಕೆ ಪೂರ್ಣ ಅಂಕಗಳಿಸುವುದು ಹೇಗೆ? (ಗಾಯತ್ರಿ ಕುಲಕರ್ಣಿ, ಕಲಾದಗಿ ಹಣ್ಣು ಬೆಳೆಗಾರರ ಸಂಘದ ಪ್ರೌಢಶಾಲೆ)
ಪ್ರಬಂಧ ಬರೆಯುವ ಸಂದರ್ಭದಲ್ಲಿ ಮೂರು ಪ್ಯಾರಾಗಳಲ್ಲಿ ಉತ್ತರ ಬರೆಯಬೇಕು. ಮೊದಲನೇ ಪ್ಯಾರಾದಲ್ಲಿ ವಿಷಯದ ಹಿನ್ನೆಲೆ, ಎರಡನೇ ಪ್ಯಾರಾದಲ್ಲಿ ನೇರ ವಿಷಯ ಹಾಗೂ ಮೂರನೇ ಪ್ಯಾರಾದಲ್ಲಿ ವಿಷಯವನ್ನು ಮುಕ್ತಾಯಗೊಳಿಸಬೇಕು. ಪ್ರತಿ ಪ್ಯಾರಾವನ್ನು 4 ರಿಂದ 5 ಸಾಲು ಬರೆಯುವ ಮೂಲಕ ಪೂರ್ಣ ಅಂಕ ಪಡೆಯಲು ಸಾಧ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.