ಸಮೀಪದ ಸಸಾಲಟ್ಟಿಯಲ್ಲಿ ಮಳೆಯ ನೀರಿನಿಂದ ಹಳ್ಳ ತುಂಬಿ ಪರಿಶಿಷ್ಟರ ಕೇರಿಯ 29 ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಕಿರಿದಾದ ಸೇತುವೆ ಮೂಲಕ ನೀರು ಹರಿದು ಹೋಗುವಂತೆ ಸ್ಥಳೀಯ ಮುಖಂಡರು ರಾತ್ರಿ ಜೆಸಿಬಿ ಯಂತ್ರದ ಸಹಾಯದಿಂದ ವ್ಯವಸ್ಥೆ ಮಾಡಿದ್ದು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ರಾತ್ರಿಯಿಡೀ ತೊಂದರೆ ಅನುಭವಿಸಿದ್ದಾರೆ. ಪಾತ್ರೆ, ಧಾನ್ಯ ಹಾಗೂ ಹಾಸಿಗೆ ನೀರು ಪಾಲಾಗಿವೆ. ಮಂಗಳವಾರ ರಾತ್ರಿಯೇ ಸ್ಥಳಕ್ಕಾಗಮಿಸಿದ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಖವಟಕೊಪ್ಪ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಸ್ಥಳೀಯರಾದ ದೇವರಾಜ ಬಳಗಾರ, ಪ್ರಕಾಶ ಬೆಂಡಿಕಾಯಿ, ಕಮಾಲ ಪಠಾಣ, ಸಿದ್ದಯ್ಯ ಮಠಪತಿ, ಶೆಟ್ಟೆಪ್ಪ ಸರಿಕರ, ಶಿವಲಿಂಗ ಪರ್ವತನವರ, ಚಂದ್ರು ಸರಿಕರ, ನಾಗಪ್ಪ ಪರ್ವತನವರ ಇದ್ದರು.