ಬಾಗಲಕೋಟೆ: ಇಲ್ಲಿನ ಜಿಲ್ಲಾಡಳಿತ ಭವನದ ಕಟ್ಟಡಕ್ಕೆ ಮೆರಗು ನೀಡಲು ₹5.43 ಕೋಟಿ ವೆಚ್ಚದಲ್ಲಿ ಸಂಪೂರ್ಣ ನವೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಭವನ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಭವನದ ಕಟ್ಟಡ ಮೇಲ್ಛಾವಣಿ, ವಾಟರ್ ಪ್ರೂಫಿಂಗ್, ಕೊಠಡಿಗಳ ಬಾಗಿಲು ಬದಲಾವಣೆ, ಶೌಚಾಲಯ ದುರಸ್ತಿ, ನೀರಿನ ಪೈಪ್ಗಳ ಬದಲಾವಣೆ, ಜನರೇಟರ್ ವ್ಯವಸ್ಥೆ, ಹೊಸ ವಿದ್ಯುತ್ ವೈರ್ ಅಳವಡಿಕೆ ಹಾಗೂ ಫೇವರ್ ಬ್ಲಾಕ್, ಪೇಂಟಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನದ ಕಟ್ಟಡ ನಿರ್ಮಾಣವಾಗಿ 15 ವರ್ಷಕ್ಕೂ ಮೇಲ್ಪಟ್ಟು ಆಗಿದೆ. ಕಟ್ಟಡದಲ್ಲಿ ಕೆಲವೊಂದು ದುರಸ್ತಿ ಕಾರ್ಯ ಕೈಗೊಳ್ಳುವ ಜೊತೆಗೆ ಹೊಸ ಮೆರಗು ನೀಡಲು ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕೆಲಸವನ್ನು ಲೋಕೋಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಡಳಿತ ಭವನ ನವೀಕರಣದ ಕ್ರಿಯಾ ಯೋಜನೆ ಸಿದ್ದಪಡಿಸಲು ಸೂಚಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಶಾಂತ, ನಿರ್ಮಿತಿ ಕೇಂದ್ರದ ಶಂಕರ ಗೋಗಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಉಪಸ್ಥಿತರಿದ್ದರು.