ರಬಕವಿ ಬನಹಟ್ಟಿ: ಪಿಕೆಪಿಎಸ್ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸಿದ್ದು ಸವದಿ ಅವರು ಬಿಜೆಪಿ ಒಮ್ಮತದ ಅಭ್ಯರ್ಥಿ ಎಂದು ರಬಕವಿ ಬನಹಟ್ಟಿ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ಲೋಕೋಪಯೋಗಿ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಕ್ಷದ ಹಿರಿಯರು, ಒಂಬತ್ತು ಜನ ಆಕಾಂಕ್ಷಿಗಳು ಮತ್ತು ತಾಲ್ಲೂಕಿನ 23 ಸಹಕಾರಿ ಸಂಘಗಳ ಸದಸ್ಯರಲ್ಲಿ ಒಮ್ಮತದ ಅಭ್ಯರ್ಥಿ ಕುರಿತು ಯಾವುದೆ ತೀರ್ಮಾನವಾಗದೆ ಇರುವುದರಿಂದ ಶಾಸಕ ಸಿದ್ದು ಸವದಿಯವರನ್ನು ಒಮ್ಮತದ ಅಭ್ಯರ್ಥಿ ಎಂದು ಆಯ್ಕೆ ಮಾಡಲಾಯಿತು ಎಂದು ಧರೆಪ್ಪ ಉಳ್ಳಾಗಡ್ಡಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, 23 ಸಹಕಾರಿ ಸಂಘಗಳ ಸದಸ್ಯರು ಆಯ್ಕೆ ಪ್ರತಿನಿಧಿಗಳ ಪತ್ರಗಳನ್ನು ಸ್ವಯಂ ಪ್ರೇರಿತರಾಗಿ ಹಿರಿಯರಿಗೆ ನೀಡಿದ್ದಾರೆ. ಶಾಸಕ ಸಿದ್ದು ಸವದಿಯವರು ಹಲವು ದಿನಗಳ ಹಿಂದೆಯೇ ತಾಲ್ಲೂಕಿನ ಹೊಸೂರಿನ ಪಿಕೆಪಿಎಸ್ ಸಂಘದ ನಿರ್ದೇಶಕರಾಗಿದ್ದಾರೆ. ಅವರು ಸಹಕಾರಿ ಸಂಘಗಳ ಕಾನೂನು ಮತ್ತು ನಿಯಮದಂತೆ ಸಂಘದ ನಿರ್ದೇಶಕರಾಗಿದ್ದಾರೆ. ಈ ಎಲ್ಲ ಸಂಗತಿಗಳು ಭೀಮಶಿ ಮಗದುಮ್ ಅವರ ಗಮನದಲ್ಲೂ ಇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಡಿ.ಆರ್.ಪಾಟೀಲ, ಬಸನಗೌಡ ಪಾಟೀಲ, ಪ್ರಸನ್ನ ದೇಸಾಯಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಪರಶುರಾಮ ಬಸವ್ವಗೋಳ, ಲಕ್ಕಪ್ಪ ಪಾಟೀಲ, ರಾಜು ಅಂಬಲಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಬಸವರಾಜ ಗೋಪಾಳಿ, ಮಾನಿಂಗ ಸನದಿ, ಈಶ್ವರ ಸೋನಾರ, ಆನಂದ ಕಂಪು ಇದ್ದರು.