ಬಾಗಲಕೋಟೆ: 'ರಾಜ್ಯಸಭೆಗೆ ಜೆಡಿಎಸ್ ವರಿಷ್ಠ ದೇವೇಗೌಡರು ಸ್ಪರ್ಧಿಸಿದರೆ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಬೆಂಬಲ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಏನೂ ಹೇಳಿಲ್ಲ.ಇವತ್ತಿನವರೆಗೂ ಆ ವಿಚಾರ ಮಾತಾಡಿಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಅಗತ್ಯಬಿದ್ದಲ್ಲಿ ಹೈಕಮಾಂಡ್ ಜೊತೆ ಮಾತನಾಡುತ್ತೇವೆ' ಎಂದರು. 'ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ದೇವೇಗೌಡರಿಗೆ ಬೆಂಬಲಿಸಿ ಹೇಳಿಕೆ ನೀಡಿರುವ ವಿಚಾರ ನನಗೆ ಗೊತ್ತಿಲ್'‘ ಎಂದು ಹೇಳಿದರು.
'ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಹೋಗುವುದಾಗಿ ಹೇಳಿದರೆ ಪಕ್ಷ ಕಳಿಸಿಕೊಡಲಿದೆ.ಅವರೊಬ್ಬ ಹಿರಿಯ ನಾಯಕ. ಅವರಿಗೆ ಆಸಕ್ತಿ ಇದ್ದರೆ ಶಿಫಾರಸು ಮಾಡುತ್ತೇವೆ' ಎಂದು ಹೇಳಿದರು.
'ಬಿಜೆಪಿಯಲ್ಲಿ ಭಿನ್ನಮತ ಇರೋದು ಸ್ಪಷ್ಟ. ಯಡಿಯೂರಪ್ಪ ನಮ್ಮ ನಾಯಕ ಅಲ್ಲ ಅಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳ್ತಾರೆ ಅದರ ಅರ್ಧವೇನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಶಾಸಕ ಉಮೇಶ ಕತ್ತಿ ಇತ್ತೀಚೆಗೆ ನನ್ನನ್ನು ಭೇಟಿ ಆಗಿಲ್ಲ. ಅಧಿವೇಶನದ ಸಂದರ್ಭದಲ್ಲಿ ಸಿಕ್ಕಿದ್ದರು' ಎಂದು ಹೇಳಿದರು.
'ಬಿಜೆಪಿ ಸರ್ಕಾರ ಬೀಳಿಸೊಕೆ ನಾವು ಕೈಹಾಕೋಕೆ ಹೋಗಲ್ಲ. ಸರ್ಕಾರ ಅದಾಗಿಯೇ ಬಿದ್ದು ಹೋದರೆ ನಾವೇನು ಮಾಡೋಕೆ ಆಗೊಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.