ಮುಧೋಳ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ತಿಮ್ಮಾಪುರದ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರು 262 ದಿನಗಳಿಂದ ತಹಶೀಲ್ದಾರ್ ಕಚೇರಿ ಬಳಿ ನಡೆಸುತ್ತಿದ್ದ ಧರಣಿ ಪೆಂಡಾಲಿಗೆ ಶುಕ್ರವಾರ ಸಂಜೆ ಬೆಂಕಿ ಹಚ್ಚಿ, ವೇದಿಕೆಯನ್ನು ಧ್ವಂಸಗೊಳಿಸಿ, ಕಾರ್ಮಿಕರನ್ನು ಥಳಿಸಲಾಗಿದೆ.
‘ಕಾರ್ಖಾನೆ ಪುನರಾಂಭ ಮಾಡಬೇಕು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೋಪಗೊಂಡ ಅಧ್ಯಕ್ಷರ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ.
ಘಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೆಲ ಪದಾಧಿಕಾರಿಗಳನ್ನು ಥಳಿಸಲಾಗಿದೆ. ಪೆಂಡಾಲ್ಗೆ ಬೆಂಕಿ ಹಚ್ಚಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸಿದ್ದಾರೆ.
ಈ ಕುರಿತು ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೆವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನೂರಾರು ದಿನಗಳಿಂದ ಧರಣಿ ನಡೆಸುತ್ತಾ ಬಂದಿದ್ದಾರೆ. ನಾವೂ ನೋಡುತ್ತಿದ್ದೆವು. ಆದರೆ ಇದೀಗ ವೈಕ್ತಿಕವಾಗಿ ನನ್ನ ತೇಜೋವಧೆ ಮಾಡಿದಾಗ ಬೆಂಬಲಿಗರು ಸಹಿಸದೆ ಹೀಗೆ ಮಾಡಿದ್ದಾರೆ’ ಎಂದರು.