ರಬಕವಿ ಬನಹಟ್ಟಿ: ಉತ್ತರ ಕರ್ನಾಟಕದಲ್ಲಿಯೂ ಸಾಕಷ್ಟು ಪ್ರತಿಭಾವಂತ ಕಲಾವಿದರು ಇದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ನಾವು ಮಾಡಬೇಕು ಎಂದು ಸ್ಥಳೀಯ ಪಿಎಸ್ಐ ರವಿಕುಮಾರ ಧರ್ಮಟ್ಟಿ ತಿಳಿಸಿದರು.
ಅವರು ಸೋಮವಾರ ಸ್ಥಳೀಯ ಗೋಕುಲ ಹೊಟೇಲ್ ಸಭಾಂಗಣದಲ್ಲಿ ನಡೆದ 'ಉಡಾಳ' ಮತ್ತು 'ಶಾಂತಲೇ' ಚಲನಚಿತ್ರ ಪೊಸ್ಟರ್ ಬಿಡುಗಡೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯರಾದ ಮಹೇಶ ರಾವಳ ಒಬ್ಬ ಉತ್ತಮ ನಿರ್ದೇಶಕ ಮತ್ತು ನಟರಾಗಿದ್ದಾರೆ. ಈಗಾಗಲೇ ‘ಚರಂತಿ’ ಚಲನಚಿತ್ರದ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಈಗ ಎರಡು ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ಮಹೇಶ ರಾವಳ ಮಾತನಾಡಿ, ರಾವಳ ಸಿನಿಫೋಕಸ್ ಆಶ್ರಯದಲ್ಲಿ ಉಡಾಳ ಮತ್ತು ಹಿಂದಿ ಚಲನಚಿತ್ರ ‘ಶಾಂತಲೇ’ ಚಲನಚಿತ್ರಗಳು ನೋಡುಗರ ಮನ ಸೆಳೆಯಲಿವೆ. ಎರಡು ಚಿತ್ರಗಳಿಗೆ ಚಿತ್ರ ತಂಡವನ್ನು ಆಯ್ಕೆ ಮಾಡುವ ಕಾರ್ಯ ನಡೆದಿದೆ. ಜೊತೆಗೆ ಈ ಭಾಗದ ಯುವ ಕಲಾವಿದರಿಗೂ ಪ್ರೋತ್ಸಾಹ ನೀಡಲಾಗುವುದು. ಚಲನಚಿತ್ರದ ಚಿತ್ರೀಕರಣವು ಸ್ಥಳೀಯ, ರಾಜ್ಯದ ವಿವಿಧ ಭಾಗಗಳು ಮತ್ತು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಪರಶುರಾಮ ರಾವಳ ಮಾತನಾಡಿದರು. ಮಲ್ಲಿಕಾರ್ಜುನ ಭದ್ರನವರ, ಧನಂಜಯ ಖಂಡೇಕರ್, ವಿಶ್ವನಾಥ ಸವದಿ, ವಿಜಯಕುಮಾರ ಅವಟಿ, ಡಾ.ನಂದಕುಮಾರ ರಾವಳ, ವಿನಾಯಕ ತಾಂಬಟ, ರಾಜು ತಳವಾರ, ಪರಶುರಾಮ ಭಜಂತ್ರಿ, ಶಂಕರ ಕೆಸರಗೊಪ್ಪ, ಶಂಕರ ಪಾಟೀಲ, ಬಾಳು ಪವಾರ, ಬಸು ಪರಾಳಮಠ ಇದ್ದರು.