ಬೀಳಗಿ: ಪಟ್ಟಣದ ಜಿ.ಎಲ್.ಬಿ.ಸಿ ಕಚೇರಿ ಆವರಣದಲ್ಲಿ ₹15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸಿದ್ಧವಾಗಿರುವ ಇಂದಿರಾ ಕ್ಯಾಂಟೀನ್ ಇನ್ನೂ ಉದ್ಘಾಟನೆಗೊಂಡಿಲ್ಲ.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಡಜನತೆಯ ಹಸಿವು ನೀಗಿಸುವ ಸದುದ್ದೇಶದಿಂದ ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಕ್ಯಾಂಟೀನ್ಗಳ ಆರಂಭಿಸಲಾಯಿತು.
ಇಲ್ಲಿ ವಾರದ ಏಳು ದಿನವೂ ಪ್ರತಿ ದಿನ ಬೇರೆ ಬೇರೆ ಉಪಾಹಾರ ಮತ್ತು ಎರಡು ಹೊತ್ತು ಊಟ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತದೆ. ₹5ಕ್ಕೆ ಉಪಾಹಾರ ಮತ್ತು ₹10ಕ್ಕೆ ಊಟ ದೊರೆಯುತ್ತಿದೆ. ಒಂದು ಹೊತ್ತಿಗೆ 300 ರಂತೆ ನಿತ್ಯ 900 ಬಡಜನರು ಊಟೋಪಹಾರ ಪಡೆದುಕೊಳ್ಳಬಹುದಾಗಿದೆ.
ಜಿಲ್ಲೆಯಲ್ಲಿ ಬಾಗಲಕೋಟೆ, ಬಾದಾಮಿ ಸೇರಿದಂತೆ ವಿವಿಧೆಡೆ ಕ್ಯಾಂಟೀನ್ ಕಾರ್ಯಾರಂಭ ಬಡಜನರ ಮನ್ನಣೆ ಗಳಿಸಿವೆ. ಆದರೆ ಕೆಲವು ಕಡೆ ಕಟ್ಟಡ, ಅಗತ್ಯ ಎಲ್ಲ ರೀತಿಯಿಂದ ಸಿದ್ಧವಾಗಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಆಗದ ಕಾರಣ ಸಾಕಷ್ಟು ಸಂಖ್ಯೆಯಲ್ಲಿರುವ ಬಡಜನರು ಕಡಿಮೆ ದರದ ಊಟೋಪಚಾರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂತಹ ತಾಲ್ಲೂಕುಗಳಲ್ಲಿ ಬೀಳಗಿ ಕೂಡಾ ಒಂದಾಗಿದೆ.
ಇಲ್ಲಿ ಕ್ಯಾಂಟೀನ್ ಕಟ್ಟಡ ನಿರ್ಮಿಸಿ ಅದಕ್ಕೆ ನೀರು, ಒಳಚರಂಡಿ, ವಿದ್ಯುದ್ದೀಪ, ಸಿ.ಸಿ ಕ್ಯಾಮೆರಾ, ಮಳೆ ನೀರು ಕೊಯ್ಲು, ಬೆಂಚು, ಬ್ಯಾರಿಕೇಡ್ ಮತ್ತು ಕಾಂಪೌಂಡ್ ಒದಗಿಸಿ, ಆಹಾರ ತಯಾರಿಕೆ ಉಪಕರಣ ಮತ್ತು ಪಾತ್ರೆಗಳನ್ನು ಕೂಡಾ ಅಳವಡಿಸಲಾಗಿದೆ.
ಬೆಂಗಳೂರಿನ ಚಫ್ತಾಕ್ ಫುಡ್ ಸಪ್ಲೈ ಅಂಡ್ ಸರ್ವಿಸ್ ಸಂಸ್ಥೆಯವರಿಗೆ ನಿರ್ವಹಣೆಯ ಆದೇಶ ಕೂಡಾ ಎರಡು ವರ್ಷಗಳ ಹಿಂದೆಯೇ ನೀಡಲಾಗಿದೆ. ಇಷ್ಟೆಲ್ಲ ಆಗಿದ್ದರೂ ಬಡ ಜನತೆಗೆ ಇದರ ಭಾಗ್ಯ ಇನ್ನು ಸಿಗುತ್ತಿಲ್ಲ.