ಮುಧೋಳ: ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಮಾಚಕನೂರ ಹೊಳೆಬಸವೇಶ್ವರ ದೇವಾಲಯ ಎರಡನೆಯ ಹಂತದ ಯೋಜನೆಯಲ್ಲಿ ಅಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿದ್ದು, ಅದನ್ನು ಅದೇ ಮಾದರಿಯಲ್ಲಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣ ಮಾಡಲಾಗುವುದು. ಕೇವಲ ಭಕ್ತರು ಮಾತ್ರವಲ್ಲ ಪ್ರವಾಸಿಗರು ಬರುವಂತೆ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಬದ್ಧವಾಗಿದ್ದೇನೆ. ಈ ಕುರಿತು ಗ್ರಾಮಸ್ಥರು ಚರ್ಚಿಸಿ ಹದಿನೈದು ದಿನಗಳಲ್ಲಿ ನಿರ್ಣಯಿಸಿ ತಿರ್ಮಾನ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸೋಮವಾರ ತಾಲ್ಲೂಕಿನ ಮಾಚಕನೂರ ಗ್ರಾಮದ ಶ್ರೀ ಹೊಳೆಬಸವೇಶ್ವರ ದೇವಾಲಯದ ಹತ್ತಿರ ₹ 1.30 ಕೋಟಿ ವೆಚ್ಚದ ಆರ್ಎಂಎಸ್ಎ ಸರ್ಕಾರಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ₹ 25 ಲಕ್ಷ ವೆಚ್ಚದಲ್ಲಿ ಎಸ್.ಟಿ ಕಾಲೊನಿಯಿಂದ ಹೊಳೆ ಬಸವೇಶ್ವರ ದೇವಾಲಯ ಸಿ.ಸಿ ರಸ್ತೆ ಮತ್ತು ಬೀದಿ ದೀಪ ಅಳವಡಿಕೆ, ಭೂಮಿ ಪೂಜೆ ಹಾಗೂ ₹ 57 ಲಕ್ಷ ವೆಚ್ಚದಲ್ಲಿ ಜಮೀನಿಗೆ ಕೊಳವೆ ಬಾವಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಕ್ಕೆ 110 ಕೆ.ವಿ ವಿದ್ಯುತ್ ಸ್ಟೇಷನ್ ಮಂಜೂರು ಮಾಡಲಾಗುವುದು, ಅದಕ್ಕೆ ₹10 ಕೋಟಿ ಒದಗಿಸಲು ಮುಂದಿನ ಸಲ ಬಂದಾಗ ಅಡಿಗಲ್ಲು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ರಾಜೀವ್ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ಅವರು ಹೇಳಿದಂತೆ ಒಂದು ಯೋಜನೆ ಲಾಭ ಪಲಾನುಭವಿಗೆ ಶೇ 15 ಮಾತ್ರ ಮುಟ್ಟುತ್ತಿತ್ತು ಶೇ 85 ಮಧ್ಯವರ್ತಿಗಳ ಪಾಲಾಗುತ್ತಿತ್ತು. ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಫಲಾನುಭವಿಗೆ ಯೋಜನೆ ಶೇ.100 ರಷ್ಟು ಹಣ ಮುಟ್ಟುತ್ತಿದೆ. 56 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಅಭಿವೃದ್ಧಿಯಾಗಲಿಲ್ಲ ದಲಿತರ ಅಭಿವೃದ್ಧಿಯಾಗಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಅಬಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂದು ಹೇಳಿದರು.
₹ 36.40 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. ಪದ್ಮಾವತಿ ಮಾದರ, ಸಂಸದ ಪಿ.ಸಿ ಗದ್ದಿಗೌಡರ, ಶಿವನಗೌಡ ನಾಡಗೌಡ, ಕೆ.ಅರ್.ಮಾಚಪ್ಪನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹನಮಂತ ತುಳಸಿಗೇರಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ಪ್ರಕಾಶ ಚಿತ್ತರಗಿ, ದುಂಡಪ್ಪ ದಾಸರಡ್ಡಿ, ಬೀಮಸಿ ತಳವಾರ, ನಿಂಗಪ್ಪ ಹುಗ್ಗಿ, ಶಿವಾನಂದ ಅಂತಾಪೂರ, ಪಿಡಬ್ಲ್ಯುಡಿ ಎಇಇ ಸೋಮಶೇಖರ ಸಾವನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕೊರಡ್ಡಿ, ಬಿಇಒ ವಿ.ಎಂ.ಪತ್ತಾರ ಇದ್ದರು.
ಹೊಳೆಬಸವೇಶ್ವರ ದೇವಾಲಯಕ್ಕೆ ಸೂರ್ಪಾಲಿ ಲಕ್ಷ್ಮೀ ನರಸಿಂಹ ದೇವಾಲಯದ ಮಾದರಿ ತಡೆಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮದ ಪ್ರಮುಖ ದುಂಡಪ್ಪ ದಾಸರಡ್ಡಿ ಮುಂದಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.