ಬಾಗಲಕೋಟೆ: ಕೋವಿಡ್ ಸೇರಿದಂತೆ ವಿವಿಧ ರೋಗಗಳನ್ನು ಎದುರಿಸಿ, ಆರೋಗ್ಯಯುತ ಜೀವನ ನಡೆಸಲು ಯೋಗ ಬಹುದೊಡ್ಡ ಅಸ್ತ್ರವಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಹೇಳಿದರು.
ಮಂಗಳವಾರ ಪಟ್ಟದಕಲ್ಲಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಆಯೋಜಿಸಿರುವ ಯೋಗ ಶಿಬಿರಗಳಲ್ಲಿ ಪಟ್ಟದಕಲ್ಲು ಒಂದಾಗಿದೆ ಎಂದರು.
ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಜೀವನದ ಭಾಗವಾಗಿಸಿಕೊಳ್ಳಬೇಕು. ಯೋಗ ಮಾಡುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಆರೋಗ್ಯಯುತ ಸಮಾಜ ಅವಶ್ಯವಾಗಿದೆ ಎಂದರು.
ಯೋಗಕ್ಕೆ ವಿಶ್ವದಲ್ಲಿ ಮಾನ್ಯತೆ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ವಿಶ್ವದ 15 ಕೋಟಿಗೂ ಹೆಚ್ಚು ಜನ ಯೋಗ ಮಾಡುತ್ತಿದ್ದಾರೆ. ಇದು ಭಾರತದ ಸಂಸ್ಕೃತಿ, ಯೋಗಕ್ಕೆ ಇರುವ ಮಹತ್ವವನ್ನು ತೋರಿಸಿತ್ತಿದೆ ಎಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಎಸ್ಪಿ ಲೋಕೇಶ ಜಗಲಾಸರ ಇದ್ದರು.