ಬಾಗಲಕೋಟೆ: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ.
ಎರಡು ದಿನಗಳ ಹಿಂದೆ ಜ್ವರ ಬಂದಿದ್ದು, ಶೀತ ಇತ್ತು. ಹೀಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆಬುಧವಾರ ಮಧ್ಯಾಹ್ನ ಬಂದು ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿದ್ದೇನೆ. ಸೋಂಕು ದೃಢಪಟ್ಟಿದೆ. ಚಿಕಿತ್ಸೆಗೆ ಇಲ್ಲಿಯೇ ದಾಖಲಾಗಿದ್ದೇನೆ ಎಂದು ಕೋಮಾರ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹೊರ ಜಿಲ್ಲೆಗಳಿಗೆ ಎಲ್ಲಿಗೂ ಪ್ರವಾಸ ಮಾಡಿರಲಿಲ್ಲ. ಜಿಲ್ಲೆಯಲ್ಲಿ ಓಡಾಟದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆನು. ಆದರೂ ಸೋಂಕು ತಗುಲಿದೆ. ಆರೋಗ್ಯ ಸ್ಥಿರವಾಗಿದೆ. ಬೇಗನೇ ಗುಣಮುಖನಾಗಿ ಮರಳಲಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
’ನನ್ನ ಜೊತೆ ಓಡಾಟ ನಡೆಸುತ್ತಿದ್ದ ಗೆಳೆಯರು ಹಾಗೂ ಬೆಂಬಲಿಗರಿಗೆ ಕ್ವಾರೆಂಟೈನ್ನಲ್ಲಿ ಇರುವಂತೆ ಹಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದೇನೆ‘ ಎಂದು ಕೋಮಾರ ತಿಳಿಸಿದರು. ರೈತರ ಕಬ್ಬಿನ ಬಿಲ್ ಬಾಕಿ ಕೊಡಿಸುವಂತೆ ಬೆಂಬಲಿಗರೊಂದಿಗೆ ಇತ್ತೀಚೆಗೆ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಮುತ್ತಪ್ಪ ಕೋಮಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.