ಹೊಸಪೇಟೆ (ವಿಜಯನಗರ): ‘ಸಹಕಾರ ರಂಗದಿಂದ ದೇಶದ ಆರ್ಥಿಕತೆಗೆ ಬಲ ಬಂದಿದೆ. ಇದರ ಕೊಡುಗೆ ದೇಶಕ್ಕೆ ಬಹಳ ದೊಡ್ಡದಿದೆ’ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಮಾಜಿ ಹೇಮಣ್ಣ ತಿಳಿಸಿದರು.
‘ಭಾರತ @75 ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಕುರಿತು ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಹಾಲು ಒಕ್ಕೂಟ, ಸಹಕಾರ ಇಲಾಖೆಗಳ ಸಹಭಾಗಿತ್ವದಲ್ಲಿ ಸೋಮವಾರ ನಗರದ ಬಿಡಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ 69ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಬ್ಯಾಂಕ್ಗಳಲ್ಲಿ ಪಾರದರ್ಶಕತೆ ಹಾಗೂ ಗ್ರಾಹಕರ ವಿಶ್ವಾಸ ಗಳಿಸುವುದು ಬಹಳ ಮುಖ್ಯ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಸ್ವಹಿತಾಸಕ್ತಿಯಿಂದಾಗಿ ಅನೇಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವು ಮುಚ್ಚುವ ಹಂತಕ್ಕೆ ಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.
‘ಸಹಕಾರ ರಂಗವನ್ನು ನಮ್ಮ ಹಿರಿಯರು ಬಹಳ ದೂರದೃಷ್ಟಿಯಿಂದ ಕಟ್ಟಿದ್ದಾರೆ. ಅದನ್ನು ನಾವು ಬಹಳ ಪ್ರಾಮಾಣಿಕವಾಗಿ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಇನ್ನಷ್ಟು ಬೆಳೆಸುವ ಅಗತ್ಯವಿದೆ. ಪ್ರತಿಯೊಬ್ಬರಿಗೂ ಸಹಕಾರ ಕ್ಷೇತ್ರದ ಯೋಜನೆಗಳು, ಕೆಲಸಗಳು ತಲುಪಬೇಕು. ಆಗ ನಮ್ಮ ಕೆಲಸ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ಹರೀಶ ಮಾತನಾಡಿ, ಸಹಕಾರ ರಂಗದ ಚಟುವಟಿಕೆಗಳು ಇಂದು ಎಲ್ಲ ಕ್ಷೇತ್ರಗಳಿಗೆ ವಿಸ್ತರಣೆಯಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಹಕಾರ ರಂಗ ನೆರವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಜೆ. ವೃಷಬೇಂದ್ರಯ್ಯ ಮಾತನಾಡಿ, ಸಹಕಾರ ಕ್ಷೇತ್ರದಿಂದ ರೈತರಿಗೆ ಬಹಳ ಅನುಕೂಲವಾಗಿದೆ. ಕಡಿಮೆ ದರದಲ್ಲಿ ಸಾಲ ನೀಡುತ್ತಿರುವುದರಿಂದ ರೈತರು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪ್ರಿಯಾಂಕ ಜೈನ್, ಬಿ.ಎಚ್.ರಾಮಣ್ಣ, ಅಯ್ಯಾಳಿ ಶಂಕರಪ್ಪ, ಗೌಳಿ ಕುಮಾರ್, ಉಪನ್ಯಾಸಕ ಸುಭಾಷ ಎ.ಗೌಡ್ರು, ಜಂಬಣ್ಣ ಇತರರಿದ್ದರು.