ಹೊಸಪೇಟೆ (ವಿಜಯನಗರ): ಡಿವೈಎಫ್ಐ, ಎಐಡಿವೈಒ ಸಂಘಟನೆ ಹಾಗೂ ‘ಆಮ್ ಆದ್ಮಿ’ ಪಕ್ಷದಿಂದ (ಎಎಪಿ) ಪ್ರತ್ಯೇಕವಾಗಿ ಭಗತ್ ಸಿಂಗ್ ಅವರ 115ನೇ ಜನ್ಮ ದಿನ ನಗರದಲ್ಲಿ ಆಚರಿಸಲಾಯಿತು.
ಮಂಗಳವಾರ ರಾತ್ರಿ ಶ್ರಮಿಕ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಿವೈಎಫ್ಐ ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ ಮಾತನಾಡಿ, ಭಗತ್ ಸಿಂಗ್ ಅವರನ್ನು ಬಲಪಂಥೀಯರು ಅವರ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಬ್ರಿಟಿಷರಿಗೆ ಶರಣಾಗತಿ ಪತ್ರ ಬರೆದು ಶರಣಾದ ಸಾವರ್ಕರ್ ಅವರನ್ನು ಮುನ್ನೆಲೆಗೆ ತಂದು ಕೋಮು ವಿಷಯ ಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಯುವಕರು ಅದಕ್ಕೆ ಕಿವಿಗೊಡಬಾರದು ಎಂದರು.
ನಗರದ ವಾಲ್ಮೀಕಿ ಐ.ಟಿ.ಐ. ಕಾಲೇಜಿನಲ್ಲಿ ಗುರುವಾರ ಎಐಡಿವೈಓನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಸದಸ್ಯ ಪ್ರಕಾಶ ನಾಯ್ಕ ಮಾತನಾಡಿ, ಭಗತ್ ಸಿಂಗ್ ಅವರು ಬಡತನವಿಲ್ಲದ, ನಿರುದ್ಯೋಗ ಸಮಸ್ಯೆ ಇಲ್ಲದ, ಆರ್ಥಿಕ ಬಿಕ್ಕಟ್ಟು ಇಲ್ಲದ ಸುಭದ್ರ ಆರ್ಥಿಕ ವ್ಯವಸ್ಥೆಯನ್ನು ರೈತ-ಕಾರ್ಮಿಕರ ನೇತೃತ್ವದಲ್ಲಿ ತರಲು ಬಯಸಿದ್ದರು ಎಂದರು. ಜಿಲ್ಲಾ ಅಧ್ಯಕ್ಷ ಪ್ರಶಾಂತ ಬಡಿಗೇರ್, ಉಪನ್ಯಾಸಕರಾದ ಕುಮಾರ್, ತಾಹೀರಾ, ಸಂಘಟನೆಯ ಜಿಲ್ಲಾ ಸದಸ್ಯ ಶೇಖರ್ ಇದ್ದರು.
ನಗರದ ತಾಲ್ಲೂಕು ಕಚೇರಿ ಎದುರು ಎಎಪಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಭಾವಚಿತ್ರದೆದುರು ಮೆಣದ ಬತ್ತಿ ಬೆಳಗಿ ಗೌರವ ಸಮರ್ಪಿಸಲಾಯಿತು. ಎಎಪಿ ಸಂಚಾಲಕ ಜೆ.ಎನ್. ಕಾಳಿದಾಸ್ ಇತರರಿದ್ದರು.