ಕುರುಗೋಡು: ಇಲ್ಲಿಗೆ ಸಮೀಪ ಕೊಂಚಿಗೇರಿ ಮತ್ತು ಸಿರಿಗೇರಿ ಗ್ರಾಮದಲ್ಲಿ ಪತ್ತೆಯಾದ 22 ಕ್ಷಯ ರೋಗಿಗಳನ್ನು ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ಶುಕ್ರವಾರ ದತ್ತು ಪಡೆದು ಆರೋಗ್ಯ ಹಾರೈಕೆ ಮತ್ತು ಔಷಧೋಪಚಾರದ ಜವಾಬ್ದಾರಿ ವಹಿಸಿಕೊಳ್ಳಲಾಯಿತು.
ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರೆಡ್ಡಿ ಶೇಂಗಾ ಬೀಜ, ಬೆಲ್ಲ, ಸಿದ್ದ ಪೌಷ್ಟಿಕ ಆಹಾರ, ಗೋದಿ ಹಿಟ್ಟು, ರಾಗಿ ಒಳಗೊಂಡ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಅವರು, ‘ಕ್ಷಯರೋಗ ದೃಢಪಟ್ಟ ಕೂಡಲೇ ಭಯಪಡುವ ಅಗತ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಸಹಾಯಕರು ರೋಗಿಗಳ ಮನೆಗೆ ನಿತ್ಯ ಭೇಟಿ ನೀಡಿ ಮಾತ್ರೆ ನೀಡುತ್ತಾರೆ. ಮಾತ್ರೆ ಸೇವಿಸುವ ಜತೆಗೆ ಪೌಷ್ಟಿಕ ಆಹಾರ ಕಡ್ಡಾಯವಾಗಿ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ್ ದಾಸಪ್ಪನವರ್, ಪಿ.ಜಿ.ಡಿ.ಎಚ್.ಪಿ. ಪ್ರಾಶಿಕ್ಷಣಾರ್ಥಿ ಖುರ್ಶಿದ್ ಬೇಗಂ, ಸಿಬ್ಬಂದಿ ಚಿದಾನಂದ, ವೆಂಕಟೇಶ್, ಎಸ್.ಸತೀಶ್, ಕೆ.ಎಂ.ಷಡಕ್ಷರಯ್ಯ, ನಾಗೇಶ್, ಸಾದಾಕಲಿ ಮತ್ತು ಈರಣ್ಣ ಇದ್ದರು.