ಹೊಸಪೇಟೆ (ವಿಜಯನಗರ): ‘ಜೆಎಸ್ಡಬ್ಲ್ಯೂ ಫೌಂಡೇಶನ್ ಸಿ.ಎಸ್.ಆರ್ ಅಡಿಯಲ್ಲಿ ರೈತರ ಅಭಿವೃದ್ಧಿಗೆ ರೈತ ಉತ್ಪಾದಕ ಕಂಪನಿಗಳನ್ನು ರಚಿಸಲು ಉತ್ತೇಜನ ಕೊಡಲು ತೀರ್ಮಾನಿಸಿದೆ’ ಎಂದು ಫೌಂಡೇಶನ್ ಕೃಷಿ ವಿಭಾಗದ ಮುಖ್ಯಸ್ಥ ಮಹೇಶ್ ತಿಳಿಸಿದರು.
ತಾಲ್ಲೂಕಿನ ಧರ್ಮಸಾಗರ ಗ್ರಾಮದಲ್ಲಿ ಬುಧವಾರ ರೈತ ಉತ್ಪಾದಕ ಕಂಪನಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಒಟ್ಟು 4 ಜಿಲ್ಲೆಗಳಲ್ಲಿ 18 ರೈತ ಉತ್ಪಾದಕ ಕಂಪನಿಗಳನ್ನು ರಚಿಸಲಾಗುತ್ತಿದೆ. ಅಂದಾಜು 15 ಸಾವಿರಕ್ಕೂ ಹೆಚ್ಚಿನ ರೈತರಿಗೆ ಗ್ರಾಮ ಮಟ್ಟದಲ್ಲಿ ರಸಗೊಬ್ಬರ, ಉತ್ತಮ ಬೀಜ ಮತ್ತು ನೇರ ಮಾರುಕಟ್ಟೆ ಸೌಲಭ್ಯ ಸಿಗಲಿದೆ ಎಂದು ಹೇಳಿದರು.
ಸಿ.ಎಸ್.ಆರ್. ಮುಖ್ಯಸ್ಥ ಪೆದ್ದಣ್ಣ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಪನಿಗಳನ್ನು ರಚಿಸಲಾಗಿದ್ದು, ರೈತರೇ ಕಂಪನಿಯ ಮಾಲೀಕರಾಗಬಹುದು. ಸೂಕ್ತ ತರಬೇತಿ, ಹೊಸ ಕೃಷಿ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದರು.
ಫೌಂಡೇಶನ್ ಕಾರ್ಯನಿರ್ವಾಹಕ ನಾಗನಗೌಡ, ಕೃಷಿ ಅಧಿಕಾರಿ ವೆಂಕಟೇಶ್, ಐಎಸ್ಎಪಿ ಅಧಿಕಾರಿಗಳಾದ ಗುರುರಾಜ್, ಸುರೇಶ, ರೈತ ಉತ್ಪಾದಕ ಕಂಪನಿಯ ಮೇಘನಾಥ, ಶಿವಲಿಂಗಪ್ಪ ಮತ್ತು 100ಕ್ಕೂ ಹೆಚ್ಚಿನ ಉತ್ಪಾದಕ ಕಂಪನಿಯ ಸದಸ್ಯರು ಹಾಜರಿದ್ದರು.