ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುನ್ನು ಸ್ವಾಗತಿಸಿ ಎರಡೂ ಸಮಾಜದವರು ಮಂಗಳವಾರ ಸಂಜೆ ನಗರ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿ ವಿಜಯೋತ್ಸವ ಆಚರಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಮೀಸಲಾತಿ ಹೆಚ್ಚಳಕ್ಕೆ ಅವಿರತ ಹೋರಾಟ ನಡೆಸಿದ ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಪರ ಘೋಷಣೆ ಕೂಗಿದರು. ಮಹರ್ಷಿ ವಾಲ್ಮೀಕಿ, ಬಾಬಾ ಸಾಹೇಬ್ ಅಂಬೇಡ್ಕರ್ ಪರವಾಗಿಯೂ ಘೋಷಣೆ ಹಾಕಿದರು.
‘ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರ ಸತತ ಹೋರಾಟ ಹಾಗೂ ಎರಡೂ ಸಮಾಜದವರ ಒಗ್ಗಟ್ಟಿನಿಂದ ಸರ್ಕಾರ ತಲೆಬಾಗಿ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ. ಸರ್ಕಾರದ ಈ ನಿರ್ಧಾರದಿಂದ ಎಸ್ಸಿ/ಎಸ್ಟಿ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅನುಕೂಲವಾಗಲಿದೆ’ ಎಂದು ಮುಖಂಡ ಮರಡಿ ಜಂಬಯ್ಯ ನಾಯಕ ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯ ಪಿ.ವಿ. ವೆಂಕಟೇಶ್, ಮುಖಂಡರಾದ ಜಂಬಯ್ಯ ನಾಯಕ, ಎಂ.ಸಿ. ವೀರಸ್ವಾಮಿ, ಕರುಣಾನಿಧಿ, ಗೋಸಲ ಭರಮಪ್ಪ, ಮಹೇಶ್ ಇತರರಿದ್ದರು.