ಹೊಸಪೇಟೆ (ವಿಜಯನಗರ): ‘ಕಲೆಗೆ ಭಾಷೆಯ ಗಡಿದಾಟಿ ಬಾಂಧವ್ಯ ಬೆಸೆಯುವ ಸಾಮರ್ಥ್ಯ ಇದೆ. ಅದಕ್ಕೆ ಯಾವುದೇ ಗಡಿ ಇಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್ ಕೆ. ರವಿಂದ್ರನಾಥ್ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಬುಧವಾರ ಹಿರಿಯ ಚಿತ್ರ ಕಲಾವಿದ ಸಂಜೀವ ಮಲ್ಲಿಕ್ ಅವರ ಸ್ಮರಣಾರ್ಥ ಆಯೋಜಿಸಿದ್ದ ‘ವರ್ಣಿಕಾ-2’ ಮೂರು ದಿನಗಳ ರಾಷ್ಟ್ರೀಯ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
’ಮನುಷ್ಯರ ಭಾವನೆಗಳಿಗೆ ಜೀವ ತುಂಬುವ, ಸಂಬಂಧ ಗಟ್ಟಿಗೊಳಿಸುವ ಶಕ್ತಿ ಚಿತ್ರಗಳಿಗಿದೆ. ನಾಡಿನ ಅನೇಕ ರಾಜ ಮನೆತನಗಳು ಚಿತ್ರಕಲೆಯನ್ನು ಪೋಷಿಸಿದ್ದು, ಇದರಿಂದ ಅದರ ಮಹತ್ವ ಅರಿಯಬಹುದು. ಹಂಪಿ, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ವರ್ಣಚಿತ್ರಗಳನ್ನು ಬಿಡಿಸಿರುವುದು ನೋಡಬಹುದು ಎಂದರು.
ಚರಿತ್ರೆ ವಿಭಾಗದ ಮುಖ್ಯಸ್ಥ ಟಿ.ಪಿ. ವಿಜಯ್ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಮೂಲ ಆಶಯವೇ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ಕುರಿತು ಸಂಶೋಧನೆ ಮಾಡುವುದು ಎಂದು ಹೇಳಿದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನ್ರಾವ್ ಬಿ. ಪಾಂಚಾಳ, ವಿದ್ಯಾರ್ಥಿಗಳಾದ ರಮೇಶ್, ಎನ್.ಜಿ ಅಂಬರೀಶ್, ಕೃಷ್ಣೇಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.