ಹೊಸಪೇಟೆ (ವಿಜಯನಗರ): ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಸ್ಥಳದ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿ ₹1.15 ಲಕ್ಷ ಮೌಲ್ಯದ 5 ಟನ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
125 ಚೀಲಗಳಲ್ಲಿ ತುಂಬಿದ್ದ 5 ಟನ್ ಪಡಿತರ ಅಕ್ಕಿಯನ್ನು ಪಟ್ಟಣದ ನೂರಾನಿ ಮಸೀದಿ ಬಳಿ ಸಂಗ್ರಹಿಸಿ ಇಡಲಾಗಿತ್ತು. ಅಕ್ಕಿ ಚೀಲಗಳನ್ನು ಲೋಡ್ ಮಾಡುತ್ತಿದ್ದ ಮಿನಿ ಗೂಡ್ಸ್ ವಾಹನ ಹಾಗೂ ಅದರ ಚಾಲಕ ಮಹಮ್ಮದ್ ಇಲಿಯಾಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಲ್ತಾನ್ ಮತ್ತು ಜಾವೀದ್ ಎಂಬುವರು ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಪಿಎಸ್ಐಗಳಾದ ಮುನಿರತ್ನಂ, ಎಸ್.ಪಿ. ನಾಯ್ಕ, ಎಎಸ್ಐಗಳಾದ ಡಿ. ಶೇಖರ್, ಬಿ.ಎಂ.ಸುರೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನ. 5ರಂದು ಶ್ರೀಹರಿಬಾಬು ಅವರು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ನಡೆಸಿದ ದೊಡ್ಡ ದಾಳಿ ಇದಾಗಿದೆ. ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಿ ಅದರಿಂದ ಹೆಚ್ಚಿನ ಹಣ ಗಳಿಸುವ ದೊಡ್ಡ ಜಾಲ ನಗರದಲ್ಲಿ ಸಕ್ರಿಯವಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕೆಂದು ಸಂಘ ಸಂಸ್ಥೆಗಳು ಮೊದಲಿನಿಂದಲೂ ಒತ್ತಾಯಿಸುತ್ತ ಬಂದಿವೆ.