ಹೊಸಪೇಟೆ (ವಿಜಯನಗರ): ‘ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿಯಾದರೂ ಸಹ ಮೊಬೈಲ್ನಿಂದ ಜನರ ನೋವು ಅರಿಯಲಾಗದು. ನೇರವಾಗಿ ಜನರ ಬಳಿ ಹೋಗಿ ಅವರ ನೋವು, ನಲಿವು ಅರಿವು ವ್ಯಕ್ತಿತ್ವ ಅಗತ್ಯ’ ಎಂದು ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ, ಸಾಹಿತಿ ಹರಿನಾಥಬಾಬು ಹೇಳಿದರು.
‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ಸಾಹಿತ್ಯ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಈಗಾಗಲೇ ಇರುವ ಸಾಮಾಜಿಕ ಸಿದ್ಧಸೂತ್ರಗಳನ್ನು ಮುರಿದು ನಮ್ಮದೇ ಆದ ಹೊಸತನ್ನು ಕಟ್ಟಿಕೊಳ್ಳುವ ಜರೂರು ಇದೆ. ಇಲ್ಲವಾದಲ್ಲಿ ಇನ್ನೊಬ್ಬರ ಉದ್ದೇಶಕ್ಕೆ ಹುಟ್ಟಿಕೊಂಡ ಫ್ರೇಮ್ಗಳಲ್ಲಿ ನೋಡುವುದು ಕಣ್ಣಿದ್ದು ಕುರುಡುತನ. ಸುತ್ತಲ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಇಂದು ಮೊಬೈಲ್ ಬಳೆಕಯಾಗುತ್ತಿದೆ. ಜನರ ನೋವು ನಲಿವುಗಳನ್ನು ಮೊಬೈಲ್ ರಹಿತವಾಗಿ ನೇರವಾಗಿ ಅನುಭವಿಸುವ ವ್ಯಕ್ತಿತ್ವಗಳು ಬೇಕು. ಭಾಷೆಯನ್ನು ಆಡುವುದರ ಮೂಲಕ ಕಲಿಯುವಂಥದ್ದು ವಿನಹಃ ವ್ಯಾಕರಣವನ್ನು ಕಲಿತು ಮಾತನ್ನು ಕಲಿಯಲಾಗದು’ ಎಂದು ಹೇಳಿದರು.
ಪ್ರಾಧ್ಯಾಪಕ ಶರಣಬಸವ ಮಾತನಾಡಿ, ಸಾಹಿತ್ಯ ಮತ್ತು ವ್ಯಾಕರಣಕ್ಕೆ ಯುವಕರು ಆಕರ್ಷಿತರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಭರವಸೆಯ ಕಿರಣ. ಸಮಾಜ, ಸಾಹಿತ್ಯ, ಶಿಕ್ಷಣ ಇರುವ ಪರಸ್ಪರ ಬೇರೆಬೇರೆಯಾದ ಸಂಗತಿಗಳೆಲ್ಲಾ ಜಗತ್ತನ್ನು ಪ್ರವೇಶಿಸುವ ವಿವಿಧ ಮಾರ್ಗಗಳು ಎಂದರು.