ದೇವನಹಳ್ಳಿ: ಯಾವುದೇಉದ್ಯೋಗಕ್ಕೆ ಕೌಶಲ ಅತಿಮುಖ್ಯವಾಗಿದೆ ಎಂದು ಮಥರ್ ತೆರೇಸಾ ಸೇವಾ ಸಂಸ್ಥೆ ಅಧ್ಯಕ್ಷ ಎಂ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ಮದರ್ ತೆರೇಸಾ ಸೇವಾ ಸಂಸ್ಥೆಯಲ್ಲಿ ದೀಶಾ ಉದ್ಯಮ ಶೀಲತಾ ಮಾರ್ಗದರ್ಶನ ಕೇಂದ್ರ ವತಿಯಿಂದ ದಿಶಾ ಐ.ಇ.ಸಿ ಔಟ್ ರೀಚ್ ತರಬೇತಿ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಅನಕ್ಷರಸ್ಥರು ಮತ್ತು ಪದವೀಧರರು ಕಡ್ಡಾಯವಾಗಿ ತರಬೇತಿ ಪಡೆದುಕೊಂಡರೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ ಎಂದರು.
ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ಕುಟುಂಬದಲ್ಲಿನ ದುಡಿಮೆ ಇಂದಿನ ಪರಿಸ್ಥಿತಿಯಲ್ಲಿ ಸಾಕಾಗದು. ತರಬೇತಿ ಪಡೆದರೆ ಮಾತ್ರ ಬ್ಯಾಂಕುಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಸಾಲ ನೀಡಲು ಮುಂದೆ ಬರುತ್ತವೆ. ತರಬೇತಿಯ ಸದುಪಯೋಗವಾಗಬೇಕು ಎಂದರು.
ಬೆಂಗಳೂರು ನಗರ ಕೈಗಾರಿಕಾ ಇಲಾಖೆ ಅಧಿಕಾರಿ ರತ್ನ ಮಾತನಾಡಿ, ವ್ಯಾಪಾರ ವಹಿವಾಟು ನಡೆಸಲು ಬರಿ ಹಣವಿದ್ದರೆ ಸಾಲದು ವಿವಿಧ ಕೌಶಲಗಳು ಬೇಕು, ವ್ಯವಹಾರದ ಕಲ್ಪನೆ ಇರಬೇಕು, ಮಾರುಕಟ್ಟೆಯ ಬಗ್ಗೆ ಅರಿವಿರಬೇಕು ಎಂದರು.
ದೈನಂದಿನ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಸುತ್ತಿರಬೇಕು. ದಿಶಾ ಮಾರ್ಗದರ್ಶನ ಕೇಂದ್ರ ವತಿಯಿಂದ ನೀಡಲಾಗುತ್ತಿರುವುದು ಕೇವಲ ಮಾರ್ಗದರ್ಶನವಲ್ಲ ಭವಿಷ್ಯಕ್ಕೆ ಗಟ್ಟಿ ಅಡಿಪಾಯ. ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಾರ್ಷಿಕವಾಗಿ ಪ್ರತಿ ಜಿಲ್ಲೆಗೆ 2500 ವ್ಯಾಪಾರ ವಹಿವಾಟು ನಡೆಸುವ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ. ತರಬೇತಿಗಾಗಿಯೇ ವಾರ್ಷಿಕ ₹56 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಭೂ ವೇದಾ ಸಂಸ್ಥೆ ಅಧ್ಯಕ್ಷೆ ಯೌವನಿ, ಹ್ಯಾಂಡ್ಸ್ ಸಂಸ್ಥೆ ಅಧ್ಯಕ್ಷ ರಾಥೋಡ್, ಮಾದಿಗ ದಂಡೋರ ರಾಜ್ಯ ಸಮಿತಿ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯೆಯರಾದ ಮಾಲಾ, ವರಲಕ್ಷ್ಮಿ ಇದ್ದರು.