ವಿಜಯಪುರ: ಸತ್ಯ ಮತ್ತು ಧರ್ಮ ಪಾಲನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಸತ್ಯಹರಿಶ್ಚಂದ್ರನ ಜೀವನ ಮಾನವ ಕುಲಕ್ಕೆ ಮಾರ್ಗದರ್ಶಿ ಎಂದು ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.
ಹೋಬಳಿಯ ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ‘ಸತ್ಯ ಹರಿಶ್ಚಂದ್ರ’ ಪೌರಾಣಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಪಂಚದಲ್ಲಿ ಸತ್ಯಕ್ಕೆ ಬೆಲೆ ಇರುವವರೆಗೆ ಹರಿಶ್ಚಂದ್ರನ ಕಥೆ ಇರುತ್ತದೆ. ನಮ್ಮ ಜನರ ಬಾಳನ್ನು ಈ ಕಥೆ ತಿದ್ದುತ್ತದೆ. ಧರ್ಮರಾಯನ ಕಷ್ಟ ನಿವಾರಣೆ ಮಾಡಿದ್ದು ಈ ಕಥೆ. ಗಾಂಧೀಜಿಯವರಿಗೆ ಸತ್ಯದ ದಾರಿಯನ್ನು ತೋರಿಸಿ ಕೊಟ್ಟದ್ದು ಈ ಕಥೆ’ ಎಂದು ಅವರು ಹೇಳಿದರು.
‘ಇಂತಹ ನಾಟಕಗಳು ಉತ್ತಮ ಬದುಕಿಗೆ ದಾರಿ ತೋರಿಸಲು ಸಾಧ್ಯವಾಗುತ್ತದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಉತ್ತಮ ಸಂಸ್ಕಾರ, ಸಾಮರಸ್ಯವಿರುವ, ಸತ್ಯದ ಮಾರ್ಗದಲ್ಲಿ ನಡೆದರೆ ಜಯ ಸಿಗಲಿದೆ ಎನ್ನುವ ಕಥೆಗಳನ್ನು ಕೇಳಬೇಕು’ ಎಂದರು.
ಸಾಯಿಬಾಬಾ ದೇವಾಲಯದ ಅಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳು ಇದ್ದರು.