ದೇವನಹಳ್ಳಿ: ‘ಮುಂಬ ರುವವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ತಂದುಕೊಟ್ಟು ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ನೋಡಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತರು ಈಗಿನಿಂದಲೇ ಸದೃಢವಾಗಿ ಪಕ್ಷ ಕಟ್ಟುವ ಕೆಲಸ ಮಾಡಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ ನೀಡಿದರು.
ತಾಲ್ಲೂಕಿನ ಜಾಲಿಗೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸುಭ್ರಮಣಿ ಅವರ ಮನೆ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದ ಎಲ್ಲಾ ಜಾತಿ, ವರ್ಗದವರನ್ನು ಸಮಾನತೆಯಿಂದ ಕಂಡು ಎಲ್ಲರಿಗೂ ಅಧಿಕಾರ ಕಲ್ಪಿಸಿಕೊಡುವ ಏಕೈಕ ಪಕ್ಷವೆಂದರೆ ಜೆಡಿಎಸ್. ರಾಷ್ಟ್ರೀಯ ಪಕ್ಷಗಳಿಂದ ಜನತೆಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾಲಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 12 ಕೋಟಿ ವೆಚ್ಚದಡಿ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕದ ಪ್ರಭಾರ ಅಧ್ಯಕ್ಷ ಬಿ. ಮುನೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ನಿಂದ ಮಾತ್ರವೇ ಅಭಿವೃದ್ಧಿ ಕಾರ್ಯಗಳಾಗಿವೆ. ಈ ಬಗ್ಗೆ ಕಾರ್ಯಕರ್ತರು, ಮುಖಂಡರು, ಮನೆ ಮನೆಗೂ ತಿಳಿಸಬೇಕು. ಮೂರು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದರೂ ಕಾಂಗ್ರೆಸ್ನವರು ಕ್ಷೇತ್ರದಲ್ಲಿ ಏನೂ ಆಗಿಲ್ಲವೆಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ತಾಲ್ಲೂಕು ಅಡಾಖ್ ಕಮಿಟಿ ಅಧ್ಯಕ್ಷ ಆರ್. ಮುನೇಗೌಡ ಮಾತನಾಡಿ, ಬೂತ್ ಮಟ್ಟದಿಂದಲೇ ಪಕ್ಷ ಸಂಘಟಿಸಲು ಕಮಿಟಿ ರಚನೆ ಮಾಡಲಾಗುತ್ತಿದೆ. ಒಂದೊಂದು ಕಮಿಟಿಯಲ್ಲಿ ಕನಿಷ್ಠ 25 ಮಂದಿ ಇರುವಂತೆ ಸ್ಥಳೀಯ ಮುಖಂಡರು ಗಮನಹರಿಸಬೇಕು ಎಂದು ತಿಳಿಸಿದರು.
ಯುವ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು. ಅಡಾಖ್ ಕಮಿಟಿಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಹನುಮಂತಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಮುಖಂಡರಾದ ಮುನಿಸ್ವಾಮಪ್ಪ, ಮಂಡಿಬೆಲೆ ರಾಜಣ್ಣ, ಮಹೇಶ್, ಲಕ್ಷ್ಮಣ್, ಶಿವಣ್ಣ, ಜಿ.ಎ. ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಸುಭ್ರಮಣಿ, ರಾಜಣ್ಣ, ಶ್ರೀರಾಮಣ್ಣ, ಭವ್ಯಾ ಪ್ರಶಾಂತ್, ರಾಧಮ್ಮ, ಶೈಲಜಾ, ಕೆಂಪರಾಜು, ಆನಂದ್, ರಾಮಣ್ಣ, ಬಚ್ಚೇಗೌಡ, ನಾಗೇಶ್, ಅಪ್ಪಯಣ್ಣ, ಹನುಮಂತಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.