ದೊಡ್ಡಬಳ್ಳಾಪುರ: ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಸ್ಮಶಾನ ಜಾಗವನ್ನು ಪ್ರಭಾವಿಗಳು ಕಬಳಿಸಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಬುಧವಾರ ನಗರದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಯು. ಮುನಿರಾಜು ಮಾತನಾಡಿ, ವಡ್ಡರಹಳ್ಳಿಯಲ್ಲಿನ ಸರ್ಕಾರಿ ಸ್ಮಶಾನದ ಸುಮಾರು 15 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬಡ ಕುಟುಂಬಗಳಿಗೆ ಸೇರಿರುವ ಸಮಾಧಿಗಳನ್ನು ನಾಶ ಮಾಡಲಾಗಿದೆ ಎಂದು ದೂರಿದರು.
ಇದೇ ಗ್ರಾಮದ ಸರ್ಕಾರಿ ಭೂಮಿಯನ್ನು ಹಣವಂತರು ಕಬಳಿಸಿ ಮನೆಗಳನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಶಾನ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಮುಖಂಡರ ಪ್ರಭಾವಕ್ಕೆ ಮಣಿದು ಸ್ಮಶಾನ ಒತ್ತುವರಿ ತೆರವು ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಚ್. ಮಂಜುನಾಥ್, ರಾಜ್ಯ ಭೋವಿ ಸಂಘದ ವೆಂಕಟೇಶ್, ಮುಖಂಡರಾದ ಶಶಿಕುಮಾರ್, ಸತೀಶ್, ವಿಜಯಕುಮಾರ್, ಲಂಕೇಶ್ ಕುಮಾರ್, ರವಿಕುಮಾರ್, ಶಿವಕುಮಾರ್, ಅರುಣ್ ಕುಮಾರ್ | ಪಾಲ್ಗೊಂಡಿದ್ದರು.