ದೇವನಹಳ್ಳಿ/ವಿಜಯಪುರ : ದೇವನಹಳ್ಳಿ ನಗರದ ಚೌಡೇಶ್ವರಿ ದೇವಾಲಯದಲ್ಲಿ 5 ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಅಶ್ವಥನಾರಾಯಣ ತಿಳಿಸಿದರು.
ನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 6 ಮತ್ತು 7 ರಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಷಯ ತೃತೀಯ ದಿನದಂದು ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಪ್ರತಿ ತಿಂಗಳು ನಡೆಯುವ ಅಮಾವಾಸ್ಯೆ ಪೂಜೆ, ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಮಾಡಲಾಗುತ್ತಿದೆ. ಅಶ್ವತ್ಥ ಗುರೂಜಿ ಮತ್ತು ತಂಡದವರಿಂದ ದಾಸೋಹ ಆರಂಭಿಸಲಾಗಿದೆ. ಪ್ರತಿ ಶುಕ್ರವಾರ, ರಾಹುಕಾಲ ಪೂಜೆ, ಮಂಗಳವಾರ ವಿಶೇಷ ಪೂಜೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆಯುವ ಹೋಮ, ಹವನ ಕಾರ್ಯಕ್ರಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಯೋಗ ಗುರು ಅಶ್ವತ್ಥ ಗುರೂಜಿ ತಂಡದವರು ಭಾಗವಹಿಸುತ್ತಿದ್ದಾರೆ.
ಮೇ 6 ರಂದು ಬೆಳಿಗ್ಗೆ ಪುಣ್ಯಾಹ ರಕ್ಷಾಬಂಧನ, ದೇವನಾಂದಿ, ಹಾಲುಕೊಡ ಅಭಿಷೇಕ, ಸಂಜೆ 6 ಗಂಟೆಗೆ ಮಹಾಸುದರ್ಶನ ಹೋಮ, ಪೂರ್ಣಾಹುತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
7 ರಂದು ಲೋಕ ಕಲ್ಯಾಣಕ್ಕಾಗಿ ಭಕ್ತರ ಸರ್ವದೋಷ ನಿವಾರಣೆಗಾಗಿ ಪ್ರತ್ಯಂಗಿರಾ ಹೋಮ ಆಯೋಜಿಸಲಾಗಿದೆ. ಹಾಲುಕೊಡ ಅಭಿಷೇಕ ಮಾಡುವವರು, ಪ್ರತ್ಯಂಗಿರಾ ಹೋಮದಲ್ಲಿ ಪಾಲ್ಗೊಳ್ಳುವವರು ಪೂಜಾ ಸಾಮಗ್ರಿಗಳಿಗೆ ನಿಗದಿತ ಶುಲ್ಕ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.
ಅರ್ಚಕ ರವಿಆಚಾರ್ಯ, ಪಿ.ಗಂಗಾಧರ್, ಪಾಪಣ್ಣ, ಎಸ್.ಆರ್.ಮುನಿರಾಜು, ರಾಜು, ಪಿ. ಜಯರಾಮ್, ಹನುಮಂತಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಶ್ವನಾಥ್, ತೇಜ, ಗೋಪಾಲ್, ಶ್ರೀರಾಮಯ್ಯ, ಅಶ್ವತ್ಥ, ಪ್ರಭು, ನಾರಾಯಣಸ್ವಾಮಿ ಇದ್ದರು.