ವಿಜಯಪುರ: ‘ಸರ್ಕಾರಿ ಜೂನಿಯರ್ ಕಾಲೇಜಿನ ಪಕ್ಕದಲ್ಲಿರುವ ಉರ್ದು ಸರ್ಕಾರಿ ಶಾಲೆಯ ಮುಂಭಾಗದ ಮೈದಾನದಲ್ಲಿ ರಾತ್ರಿಯ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಹೋಗುತ್ತಿದ್ದಾರೆ. ಇದರಿಂದ ಶಾಲೆಗೆ ಹಾಗೂ ಇಲ್ಲಿ ಓಡಾಡುವಂತಹ ಜನರಿಗೆ ತೊಂದರೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ದೂರಿದ್ದಾರೆ.
‘ಶಾಲೆಗೆ ಬೇಸಿಗೆ ರಜೆ ಇದೆ. ಇದನ್ನೇ ನೆಪ ಮಾಡಿಕೊಂಡಿರುವ ಕೆಲವರು ಸಂಜೆ 7 ಗಂಟೆಯ ನಂತರ ಶಾಲಾ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಒಡೆದು ಹೋಗುತ್ತಿದ್ದಾರೆ. ಸಂಜೆಯ ವೇಳೆ ಕೆಲವರನ್ನು ಗದರಿಸಿದ್ದೇವೆ. ಆದರೂ ಇದೇನು ನಿಮ್ಮ ಆಸ್ತಿನಾ ಎಂದು ನಮ್ಮನ್ನೇ ದಬಾಯಿಸುತ್ತಾರೆ’ ಎಂದು ಅವರು ಹೇಳಿದರು.
‘ಬೆಳಗಿನ ಸಮಯದಲ್ಲಿ ಮಕ್ಕಳು ಆಡಲಿಕ್ಕೆ ಈ ಮೈದಾನಕ್ಕೆ ಬರುತ್ತಾರೆ. ವೃದ್ಧರು ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಬರುತ್ತಾರೆ. ಬಾಟಲಿ ಚೂರು ಬಿದ್ದಿರುವುದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಸ್ಥಳೀಯ ನಿವಾಸಿ ಸೋಮಶೇಖರ್ ಮಾತನಾಡಿ ‘ರಾತ್ರಿ 12 ಗಂಟೆಯಾದರೂ ಇಲ್ಲಿಂದ ಹೋಗುವುದಿಲ್ಲ. ಕುಡಿದ ಮತ್ತಿನಲ್ಲಿ ಜೋರಾಗಿ ಮಾತನಾಡುತ್ತಿರುತ್ತಾರೆ. ರಾತ್ರಿಯ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡಲಿಕ್ಕೂ ಬಿಡುವುದಿಲ್ಲ. ಬೆಳಿಗ್ಗೆ ಬಾಟಲಿಗಳು ಚೂರು ಚೂರಾಗಿ ಬಿದ್ದಿರುತ್ತವೆ. ಆಟವಾಡಲಿಕ್ಕೆ ಬರುವ ಹುಡುಗರು ಬಾಟಲಿಗಳ ಚೂರುಗಳನ್ನು ತೆಗೆಯಬೇಕಾಗಿದೆ. ಈ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.