ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲದಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ಗಲಾಟೆಯಲ್ಲಿ ಇಬ್ಬರು ಕೊಲೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು ರಾಜಕೀಯ ಪ್ರೇರಿತ ಪಂದ್ಯಾವಳಿ, ಕ್ರೀಡಾಕೂಟ ಆಯೋಜನೆಗೆ ನಿರ್ಬಂಧ ವಿಧಿಸಿದೆ.
‘ಇಬ್ಬರ ಕೊಲೆ ಹಿನ್ನೆಲೆಯಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್ ಪಂದ್ಯಾವಳಿಗಳನ್ನು ನಿರ್ಬಂಧಿಸಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಭಾನುವಾರ ಆದೇಶ ಹೊರಡಿಸಿದ್ದಾರೆ.
‘ರಾಜಕೀಯ ಪ್ರೇರಿತ ಕ್ರಿಕೆಟ್ ಪಂದ್ಯಾವಳಿಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾರಾದರೂ ಪಂದ್ಯಾವಳಿ ಆಯೋಜಿಸಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಡಿವೈಎಸ್ಪಿ, ಸಿಪಿಐ, ಪಿಎಸ್ಐಗಳಿಗೆ ಸೂಚನೆ ನೀಡಿದ್ದಾರೆ.
ಚುನಾವಣೆ ಮುಗಿಯುವವರೆಗೂ ಸರ್ಕಾರ ನಡೆಸುವ ಕ್ರೀಡೆಗಳನ್ನು ಹೊರತು ಪಡಿಸಿ ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆಗಳು ಆಯೋಜನೆ ಮಾಡುವ ಯಾವುದೇ ಕ್ರೀಡೆಗಳಿಗೂ ಅವಕಾಶ ನೀಡದಂತೆ ಸೂಚಿಸಿದ್ದಾರೆ.