ಆನೇಕಲ್:ಪಟ್ಟಣದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಗುರುವಾರ ಬೆಳೆ ಸಾಲ ವಿತರಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಣಕನಹಳ್ಳಿ ಸೋಮಶೇಖರರೆಡ್ಡಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ರೈತರ ಸೇವೆಗಾಗಿ ಇದೆ. ಬಿಡಿಸಿಸಿ, ವಿಎಸ್ಎಸ್ಎನ್, ಅಪೆಕ್ಸ್ ಬ್ಯಾಂಕ್ಗಳು ರೈತ ಸ್ನೇಹಿ ಬ್ಯಾಂಕ್ ಆಗಿವೆ. ವಿವಿಧ ಸೌಲಭ್ಯಗಳ ಮೂಲಕ ರೈತ ಪರವಾಗಿ ಕಾರ್ಯಕ್ರಮ ರೂಪಿಸಿವೆ ಎಂದರು.
ಶೂನ್ಯ ಬಡ್ಡಿ ದರದಲ್ಲಿ ಹಲವು ಸೌಲಭ್ಯ ಕಲ್ಪಿಸುವ ಮೂಲಕ ರೈತಸ್ನೇಹಿಯಾಗಿದೆ. ಸಹಕಾರ ಬ್ಯಾಂಕ್ಗಳು ರೈತರ ನಡುವೆ ಉತ್ತಮ ಬಾಂಧವ್ಯ ಕಲ್ಪಿಸಿದೆ. ಈ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತರು ಸಾಲವನ್ನು ಸದುದ್ದೇಶಕ್ಕಾಗಿ ಬಳಸಿಕೊಂಡು ಸಾಲ ಮರುಪಾವತಿ ಮಾಡುವುದರಿಂದ ಇತರೆ ರೈತರಿಗೆ ಅನುಕೂಲವಾಗುವಂತಾಗುತ್ತದೆ. ಸಹಕಾರ ಸಂಘಗಳಿಗೆ ₹ 2.58 ಕೋಟಿ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ₹ 1.35 ಕೋಟಿ ಚೆಕ್ ವಿತರಿಸಲಾಗಿದೆ ಎಂದರು.
ಹಾಪ್ಕಾಮ್ಸ್ ನಿರ್ದೇಶಕ ಮುತ್ತೂರು ಜೆ. ನಾರಾಯಣಪ್ಪ ಮಾತ ನಾಡಿ, ಸ್ತ್ರೀಶಕ್ತಿ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು ಎಂದರು.
ಮಾಯಸಂದ್ರ ವಿಎಸ್ಎಸ್ಎನ್ ಅಧ್ಯಕ್ಷ ಎಂ. ರಾಮಕೃಷ್ಣ, ಹಾರಗದ್ದೆ ವಿಎಸ್ಎಸ್ಎನ್ ಅಧ್ಯಕ್ಷ ಮುನಿರಾಜು, ದೊಡ್ಡಹಾಗಡೆ ವಿಎಸ್ಎಸ್ಎನ್ ಉಪಾಧ್ಯಕ್ಷ ಎಚ್.ಆರ್. ಶ್ರೀನಿವಾಸ್, ಬನ್ನೇರುಘಟ್ಟ ವಿಎಸ್ಎಸ್ಎನ್ ಅಧ್ಯಕ್ಷ ಪುರುಷೋತ್ತಮಚಾರ್, ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಅನುಷಾ ಹಾಜರಿದ್ದರು.